Saturday, 23 May 2020

ನಾನು ಕೊಂದ ಹುಡುಗಿ

ನಾನು ಕೊಂದ ಹುಡುಗಿ’ ಅಜ್ಜಂಪುರ ಸೀತಾರಾಮಯ್ಯನವರು ‘ಆನಂದ’ ಎನ್ನುವ ಕಾವ್ಯನಾಮದಲ್ಲಿ ಬರೆದ ಒಂದು ಸಣ್ಣ ಕತೆ. ನನ್ನನ್ನು ಬಹಳ ಗಾಢವಾಗಿ ಕಾಡಿದ ಕತೆ ಅದು.

ಪ್ರಾಚೀನ ದೇವಸ್ಥಾನದ ಶಿಲ್ಪಕಲೆಗಳನ್ನು ಅಧ್ಯಯನ ಮಾಡುವ ಒಬ್ಬ ಸಂಶೋಧಕ ಇರುತ್ತಾನೆ. ಊರಿಂದ ಊರಿಗೆ ಪ್ರಾಚೀನ ಚಿಲ್ಪ ಕಲೆಗಳ ಬಗೆ ಅಧ್ಯಯನ ಮಾಡುತ್ತಾ ಹೋಗ್ತಾ ಇದ್ದೋನು ಅವನು. ಒಂದು ಸಣ್ಣ,ಪುಟ್ಟ ಹಳ್ಳೀಲಿ ಒಂದೆರಡು ದಿನದ ಮಟ್ಟಿಗೆ ಉಳಿಯಬೇಕಾಗುತ್ತದೆ. ಆ ಹಳ್ಳಿಯ ದೊಡ್ಡ ಮನುಷ್ಯರೊಬ್ಬರು ತಮ್ಮ ಮನೆಯಲ್ಲಿ ಅವನಿಗೆ ಆತಿಥ್ಯ ನೀಡುತ್ತಾರೆ. ಅಂದು ಸಂಜೆ ಹಳಿಯ ಒಬ್ಬ ದೊಡ್ಡ ಮನುಷ್ಯರೊಬ್ಬರ ಮನೆಯಲ್ಲಿ ಊಟಕ್ಕೆ ಕೂತಾಗ, ಗೆಜ್ಜೆ ಸದ್ದಿನ ಹೆಜ್ಜೆಯನಿಡುತ್ತಾ…

ಸುಂದರ ಹೆಣ್ಣುಮಗಳೊಬ್ಬಳು ನಾಚುತ್ತಲೇ ಬಂದು ಊಟ ಬಡಿಸಿ ಹೋಗುತ್ತಾಳೆ. ಆನಂತರ ಮನೆಯ ಹಿಂದಿನ ತೋಟದಲ್ಲಿ ನಡೆಯುತ್ತ ಇರುವಾಗ, ಆ ಸುಂದರ ಹೆಣ್ಣುಮಗಳು ಯಾರೆಂದು ಆ ಮನೆಯ ಕೆಲಸಗಾರನನ್ನು ವಿಚಾರಿಸುತ್ತಾನೆ. ‘ಅವಳು ನಮ್ಮ ಯಜಮಾನ್ರ ಮಗಳು, ಯಾಕೆ ಸ್ವಾಮಿ’ ಎಂದು ಇವನನ್ನು ಅನುಮಾನಿಸುತ್ತಾ ಉತ್ತರಿಸುತ್ತಾನೆ ಮನೆಯ ಕೆಲಸಗಾರ.

ತಾನು ಮುಗ್ಧವಾಗಿ ಕೇಳಿದ್ದನ್ನು ಕೆಲಸಗಾರನು ತನ್ನನ್ನು ಅಪಾರ್ಥ ಮಾಡಿಕೊಂಡನಲ್ಲ ಎಂದು ಕಸಿವಿಸಿಗೊಳ್ಳುತ್ತಲೇ, ತನ್ನ ಕೋಣೆಯನ್ನು ಸೇರಿ ತನ್ನ ಹೆಂಡತಿಗೆ ಈ ಬಗ್ಗೆ ಕಾಗದ ಪತ್ರ ಬರೆಯುವಾಗ ಯಾರೋ ಒಬ್ಬರು ಬಾಗಿಲು ತಟ್ಟಿದಂತಾಗುತ್ತದೆ.

ಬಾಗಿಲು ತೆಗೆದರೆ ಆಶ್ಚರ್ಯ. ಮದುವಣಗಿತ್ತಿಯಂತೆ ಅಲಂಕಾರ ಮಾಡಿಕೊಂಡು ಕೈಯಲ್ಲಿ ಹಾಲಿನ ಲೋಟ, ತಾಂಬೂಲ ಹಿಡಿದು ಒಳಗೆ ಬಂದವಳು ಆ ಸುಂದರ ಹೆಣ್ಣುಮಗಳು..! ಕೋಣೆಯ ಒಳಗೆ ಬಂದು ಬಾಗಿಲ ಚಿಲಕ ಹಾಕುತ್ತಾಳೆ.

ಏನೂ ಅರ್ಥವಾಗದೆ ನೋಡುತ್ತಿದ್ದವನಿಗೆ- ‘ನೀವು, ನನ್ನ ಬಗ್ಗೆ ವಿಚಾರಿಸಿದರಂತೆ. ಹೌದಾ ಎಂದು ಕೇಳುತ್ತಾಳೆ! ನಿನ್ನ ಬಗೆ ಅವರು ವಿಚಾರಿಸಿದ್ದಾರೆ ಹೋಗಿ ಅವರನ್ನ ನೋಡ್ಕೋ ಅಂತ ನನ್ನ ಅಪ್ಪ ನಿಮ್ಮ ಬಳಿಗೆ ನನ್ನನ್ನು ಕಳುಹಿಸಿಕೊಟ್ಟರು ಎನ್ನುತ್ತಾ ಮಂಚದ ಮೇಲೆ ಹೋಗಿ ಕೂರುತ್ತಾಳೆ.

ಯಾರು ತಪ್ಪು ತಿಳಿಯಬೇಡಿ! ವಿಷಯ ಇಷ್ಟೇ, ಆ ಊರಿನ ದೊಡ್ಡ ಮನುಷ್ಯರ ಮೊದಲ ಮಗಳಿವಳು. ದೊಡ್ಡ ಮನುಷ್ಯರಿಗೆ ಬಹಳ ವರ್ಷಗಳವರೆಗೆ ಗಂಡು ಸಂತಾನದ ಭಾಗ್ಯವಿರಲಿಲ್ಲ. ತನಗೆ ವಂಶೋದ್ಧಾರಕ ಮಗ ಹುಟ್ಟುತ್ತಿಲ್ಲ ಎನ್ನುವ ಆತಂಕದಲ್ಲಿ, ‘ಮುಂದೆ ನನಗೆ ಒಂದು ಗಂಡು ಮಗುವಾದರೆ ಇವಳನ್ನು ನಿನ್ನ ಸೇವೆಗೆ(ದೇವರ ಸೇವೆಗೆ) ಮೀಸಲಿಡುತ್ತೇನೆ’ ಎಂದು ಹರಕೆ ಹೊತ್ತ ಆ ದೊಡ್ಡ ಮನುಷ್ಯನಿಗೆ ಮುಂದೆ ಒಂದು ಗಂಡು ಮಗುವಾಗುತ್ತದೆ.

ತಾನು ಹೊತ್ತ ದೇವರ ಹರಕೆಯಂತೆ ಇವಳು, ಬರುವ,ಹೋಗುವ ಅತಿಥಿಗಳನ್ನು ಸತ್ಕರಿಸುವ ದೇವರ ದಾಸಿಯಾಗಿದ್ದಾಳೆ.! ಹೀಗೆ ತನ್ನನ್ನು ಬಯಸುವ ಅತಿಥಿಗಳನ್ನು ಸತ್ಕರಿಸುವ ದೇವದಾಸಿಯಾಗುವುದೇ ತನ್ನ ಬದುಕಿನ ಪುಣ್ಯ, ಸಾರ್ಥಕ್ಯವೆಂದು ಗಾಢವಾಗಿ ನಂಬಿ ಅವಳು ಬದುಕುತ್ತಿದ್ದಾಳೆ,ಆ ಮುಗ್ಧ ಸುಂದರ ಹೆಣ್ಣುಮಗಳು.!

ಇಂಥ ಕ್ರೂರ ಮೂಢನಂಬಿಕೆಯನ್ನು ಕಂಡು ತತ್ತರಿಸಿ ನಡುಗಿ ಹೋದ ಅವನು, ಆಕೆಯನ್ನು ತನ್ನ ಪಕ್ಕ ಕೂರಿಸಿ, ‘ನೀನು ನಂಬಿರುವುದು ತಪ್ಪು.ಇದು ನಿನ್ನ, ನಿನ್ನ ತಂದೆಯ ಮೂಢನಂಬಿಕೆ,ನೀನು ಮಾಡುತ್ತಿರುವುದು ದೇವರ ಸೇವೆ,ಸತ್ಕಾರವಲ್ಲ. ಅದು ಪರೋಕ್ಷ ವ್ಯಭಿಚಾರ ಎಂದು ಆ ಸುಂದರ ಮನಸಿನ, ಸುಂದರ ಹೆಣ್ಣುಮಗಳಿಗೆ ತಿಳಿಸಿ ಹೇಳಿದನು. ಈ ಮೂಢನಂಬಿಕೆಯಿಂದ ನೀನು ಇಂದೇ ಹೊರಗೆ ಬಾ’ ಎಂದು ಬೈದು,ಅವಳಿಗೆ ತಿಳುವಳಿಕೆ,ಅರಿವು ನೀಡಿ ಕಳುಹಿಸುತ್ತಾನೆ. ತಾನು ನಂಬಿದ್ದ ಪ್ರಪಂಚವೇ ಕುಸಿದು ಬಿದ್ದಂತಾಗಿ ಅಳುತ್ತಲೇ ಅವಳು ಅಲ್ಲಿಂದ ತಲೆ ತಗ್ಗಿಸಿ ಓಡಿಹೋಗುತ್ತಾಳೆ.

ಮಾರನೆಯ ದಿನ ಬೆಳಿಗ್ಗೆ ತೋಟದ ಬಾವಿಯಲ್ಲಿ ಆ ಸುಂದರ ಹುಡುಗಿಯ ಹೆಣ ತೇಲುತ್ತಿರುತ್ತದೆ.! ಬದುಕಲು ಇದ್ದ ಕಾರಣವನ್ನು ಸಹ ಕಳೆದುಕೊಂಡ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.! ‘ಅವಳ ಸಾವಿಗೆ ಕಾರಣ ಯಾರು? ಅವಳು ನಂಬಿದ್ದ (ಮೂಢ)ನಂಬಿಕೆಯನ್ನು ಛಿದ್ರಗೊಳಿಸಿ, ಬೇರೊಂದು ನಂಬಿಕೆಯನ್ನು ಕೊಡಲಾಗದೆ, ನಾನೇ ಅವಳನ್ನು ಕೊಂದೆನೇ’ ಎನ್ನುವ ಪಾಪಪ್ರಜ್ಞೆ ,ಪ್ರಶ್ನೆ ಅವನನ್ನು ಕಾಡತೊಡಗುವಲ್ಲಿಗೆ ‘ನಾನು ಕೊಂದ ಹುಡುಗಿ’ ಕತೆ ಅಲ್ಲಿಗೆ ಮುಗಿಯುತ್ತದೆ.! ನಾನು ನನ್ನ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರಬಾರದೆನ್ನುವುದಕ್ಕೆ ಈ ಕತೆಯೇ ಕಾರಣ. ಮತ್ತೊಂದು ಬಲವಾದ ನಂಬಿಕೆಯನ್ನು ಕೊಡಲು ಸಾಧ್ಯವಾದರೆ ಮಾತ್ರ ನಾವು ಇನ್ನೊಬ್ಬರ ನಂಬಿಕೆಯ ಮೇಲೆ ಕೈ ಇಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಅವರವರ ನಂಬಿಕೆಗಳೊಂದಿಗೆ ಜನ ಅವರಿಸ್ಟದಂತೆ ಬದುಕಲಿ. ಇದರಿಂದ ಲಾಭವಿಲ್ಲದಿದ್ದರೂ, ನಷ್ಟವಂತೂ ಖಂಡಿತವಾಗಿ ಇಲ್ಲ. (ಕೃಪೆ-ಪ್ರಜಾವಾಣಿ)

ನೀಲು ಕಾವ್ಯ-- ಪಿ.ಲಂಕೇಶ್



ಪ್ರೀತಿ, ಪ್ರೇಮ, ಕಾಮ, ಕಾಮನೆಗಳನ್ನು ಅವರು ಬರಿ ಪ್ರಸ್ತಾಪಿಸದೆ “ಪ್ರಸ್ತ”ಪಿಸುತ್ತಾರೆ…

ನಾವು ಪ್ರೀತಿಸುವ ವ್ಯಕ್ತಿಯಲ್ಲಿ
ತಪ್ಪು ಕಂಡು ಹಿಡಿವ ಕೆಲಸ
ಓಯಸಿಸ್’ನಲ್ಲಿ
ಹಸಿರು ಮತ್ತು ನೀರನ್ನು
ತಿರಸ್ಕರಿಸಿದಂತೆ

ಎಂದೋ ಕಂಡ ಮೋಹಕ ಹೆಣ್ಣನ್ನು
‌ನೆನೆದು ದುಗುಡಗೊಳ್ಳುವ
ಗಂಡಿನಲ್ಲಿ ಎಷ್ಟು
ಸ್ವಾರ್ಥ, ಎಷ್ಟು ಪ್ರೇಮ, ಎಷ್ಟು
ಕೇವಲ ಚಪಲ ?

ಎಂಥವನನ್ನೂ ವಾಕ್ಪಟುವನ್ನಾಗಿ
ಮಾಡುವ ಎರಡು ವಸ್ತುಗಳು
ವ್ಯಾಪಾರ ಮತ್ತು ಪ್ರೇಮ
ಎನ್ನುವುದು ಎಷ್ಟು ತಮಾಷೆ !

ವ್ಯವಹಾರ ಲೋಕದಲ್ಲಿ ಲೆಕ್ಕ
ನಿಷ್ಠೆ, ನಿಯತ್ತು ಇರುವಂತೆ
ಅನುರಾಗ ಲೋಕದಲ್ಲಿ
ಚಂಚಲತೆ, ಊಹೆ ಮತ್ತು ಕವನ
ಎಂದರೆ ನಗುವೆಯಾ ?

ಸುರಸುಂದರಿಯ ರೂಪ
ಅರಳಿದ್ದು
ನಶಿಸಿದ್ದು
ಇವೆರಡರ ನಡುವಿನ ಸೂಕ್ಷ್ಮ
ಕ್ಷಣಕ್ಕಾಗಿ ಅರಸಿ ನಿರಾಶನಾಗುವುದು
ಪ್ರೇಮಿಯ ಪರಂಪರಾಗತ ಗೋಳು

ನನ್ನ ಬದುಕಿನ ಮೂವತ್ತು ವಸಂತಗಳು
ಮೂವತ್ತು ಮುಂಗಾರು
ಬೇಸಿಗೆ
ಎಲ್ಲವನ್ನೂ ಮೀರಿ
ಚಳಿಗಾಲವೊಂದರ ನಡುರಾತ್ರಿಯ ಕನಸು
ನನಗೆ ಕಂಪನ ತರುವುದು

ಕಾಮ, ಪ್ರೇಮವ ಪ್ರತ್ಯೇಕಿಸಿ
ನೋಡಬೇಡ :
ಚುಂಬನದ ನಾಲ್ಕು ತುಟಿಗಳಿಗೆ
ಸಾಕ್ಷಿಯಾದ ಎರಡು ನಾಲಿಗೆಗಳೂ
ಸದಾ ಗೊಂದಲದ ಸ್ಥಿತಿಯಲ್ಲಿರುತ್ತವೆ

ಪರಿಚಯ ಮತ್ತು ಪ್ರತಿಭಟನೆಯ
ನಡುವೆ
ಹೇಗೋ ಗೂಡು ಕಟ್ಟುವ
ಹಕ್ಕಿ
ಪ್ರೇಮ

ನೀನು ಮೆಚ್ಚುವ ಪ್ರೇಮಿಯ
ಪುಟ್ಟ ಗುಡಿಸಲು ಅರಮನೆಯೆಂದು
ಭ್ರಮಿಸಬೇಡ :
ಎಲ್ಲ ಪ್ರೇಮದ ಹಿಂದೆಯೂ
ಒಂದು ಸೆರೆಮನೆ ಇದೆ

ಮೊನ್ನೆ ತುಂಬು ಸೀರೆ ಉಟ್ಟು
ಬಟ್ಟೆ ಗಿರಣಿಗಳಂತಿದ್ದ ಹುಡುಗಿಯರು
ಈಚೆಗೆ ಗಿರಣಿಗಳ ಮುಷ್ಕರದಲ್ಲಿ
ಭಾಗವಹಿಸಿದ್ದಕ್ಕೆ
ಬೇಸಿಗೆ ಕಾರಣವಿರಬಹುದೆ ?

Tuesday, 19 May 2020

ಅಕ್ರಮ

ಹಸಿಮಾಂಸ ಮತ್ತು ಹದ್ದುಗಳು- ಗೀತಾ ನಾಗಭೂಷಣರು (ಚಿತ್ರ)
"""'"""""''"'''''"""""'''''''''''''''''''''''"'""""'"""""""""""""""'''''''''''''''''''

ಅಕ್ರಮ ಸಂಬಂಧ ಯಾವುದು. ಇದು ಅನೈತಿಕ ವೇ..? 

ಯಾವುದನ್ನು ನಾವು ಅಕ್ರಮ ಸಂಬಂಧ ಎಂದು ವ್ಯಾಖ್ಯಾನಿಸಬಹುದು. ದೈಹಿಕವಾಗಿ ಅಥವಾ ಮಾನಸಿಕವಾಗಿ ಕೂಡುವಿಕೆಯನ್ನೋ..? ಸಮ್ಮತಿಯೊಂದಿಗೋ... ಆಮಿಷದೊಂದಿಗೆನ..?

ಬಾಡಿಗೆ ತಾಯ್ತನ , ಸ್ತನದಾಯಿನಿ ,ಲೈಂಗಿಕ ಕಾರ್ಯಕರ್ತರು ಇವರನ್ನು ನಿರುದ್ಯೋಗಿಗಳನ್ನಬೇಕೆ ಅಥವಾ ಕಾರ್ಮಿಕರನ್ನೆಬೇಕೇ.  ಅಕ್ರಮ ಸಂಬಂಧವೇ..? ಹಾಗಾದರೆ ಅಪರಾಧಿ ಯಾರು? ಯಾರನ್ನು ದೂಷಿಸಬೇಕು.

ಕೋಟೆಗಳ ಕೆಡವುತ್ತ, ತಲೆಗಳ ಉರುಳಿಸುತ್ತಾ, ಸ್ತ್ರೀಯರನ್ನು ವರಿಸುತ್ತಾರೆ  ರಾಜಸೂಯ ಯಾಗದ ಮೂಲಕ ಚಕ್ರವರ್ತಿಯಾಗಿ ಮೆರೆಯುತ್ತಾ ಚಾಲ್ತಿಯಲ್ಲಿರುವ ಶ್ರೀರಾಮಚಂದ್ರನಂತ ಆದರ್ಶ ಪುರುಷೋತ್ತಮರನ್ನು  ಏನೆಂದು ವ್ಯಾಖ್ಯಾನಿಸಬೇಕು.?


ಸಾಹಿತ್ಯದಲ್ಲಿ ಬಹುತೇಕ ಕಥೆ ಕಾದಂಬರಿ ಕಾವ್ಯಗಳಲ್ಲಿ ವಿವಾಹ ಪೂರ್ವದಲ್ಲಿ ಅಥವಾ ವಿವಾಹದ ನಂತರ ವಾಗಲಿ ಅಕ್ರಮ ಸಂಬಂಧ,ಸಂತಾನ ಎಂಬ ಅಪರಾಧ ಹೆಣ್ಣಿಗೆ ಮಾತ್ರ ಕಟ್ಟಿ ಪುರುಷ ಇದರಿಂದ ಪಲಾಯನ ಮಾಡಿದ್ದಾನೆ. (ಸತ್ಯವತಿ, ಕುಂತಿ, ಮಾದವಿ,  ದ್ರೌಪದಿ ಅಕ್ರಮ ಸಂಬಂಧದ ಮೂಲಕ ಸಂತಾನ ಪಡೆದಿದ್ದೆ..?)ಹೀಗೆ ಅನೈತಿಕ ಲೈಂಗಿಕ ಸಂಬಂಧಗಳನ್ನು ಮನುವಾದ ದಲ್ಲಿಯೂ ಹೆಣ್ಣು ಮತ್ತು ಶೂದ್ರರನ್ನು ಭೋಗದ ವಸ್ತು ಹಾಗೂ ಗುಲಾಮರಂತೆ ಬಿಂಬಿಸುತ್ತಾ ಶತಮಾನಗಳಿಂದ ಶೋಷಣೆ ಮಾಡುವ ನೈತಿಕತೆಯ ದೃಷ್ಟಿಕೋನದ ಪರಿಕಲ್ಪನೆ ಕಾಲದೇಶದ ಧರ್ಮಗಳಲ್ಲಿ ಬೇರೆ ಬೇರೆಯಾದ ನಿಲುವುಗಳನ್ನು ತಳೆದಿದೆ.

ಅಕ್ರಮ ಸಂಬಂಧಗಳ ಕುರಿತು ನೈಜ ಪರಿಕಲ್ಪನೆ ಪುರುಷಕೇಂದ್ರಿತ ನೀಲುವುಗಳ ಮುಖವಾಡ ಅನಾವರಣವಾಗುವುದು ಹೆಣ್ಣಿಗೆ ಸಾಹಿತ್ಯದ ಅಭಿವ್ಯಕ್ತಿಗೆ ಅವಕಾಶ ಸಾಧ್ಯವಾದಾಗ ಮಾತ್ರ. ಬಹುತೇಕ ಸಾಹಿತ್ಯದಲ್ಲಿ ಪುರುಷಕೇಂದ್ರಿತ ನಿಲುವುಗಳ ಆಶಯಗಳ ಹಿತಾಸಕ್ತಿ ಒಳಗೊಂಡು ತನ್ನನ್ನು ಅಪರಾಧಿ ಸ್ಥಾನದಿಂದ ಹೊರಗುಳಿದು ಒಂದು  ಸಮೂಹ , ವರ್ಗವನ್ನು ಕೀಳಿಕರಿಸಿದ್ದಾರೆ.

ಚೋಮನ ದುಡಿಯಲ್ಲಿ ಬೆಳ್ಳಿ ಒಡೆಯನ ಕೈ ಸೆರೆಯಾದುದ್ದರ ಹಿಂದೆ ಕೌಟುಂಬಿಕ ಸಾಮಾಜಿಕ ಬಡತನ ಹಸಿವು ಕಾರಣಗಳಿವೆ. ಸಂಸ್ಕಾರ ಕಾದಂಬರಿ ಪ್ರಾಣೇಶಾಚಾರ್ಯ ಪರವಾಗಿ ಸ್ವೇಚ್ಛಾಚಾರದ ಮಾತುಗಳನ್ನ ಮೈಲಿಗೆ, ಮಡಿವಂತಿಕೆ ಹೆಸರಿನಲ್ಲಿ ಹಾರುವವರು ಹೆಣ್ಣನ್ನು ದೂರಲಾಗಿದೆ. ಕುವೆಂಪು ಕಾದಂಬರಿಗಳಲ್ಲಿ ಕೆಳವರ್ಗದ ಯುವಕ ಮೇಲ್ವರ್ಗದ ಹೆಣ್ಣನ್ನು ಪ್ರೀತಿಸಿದಾಗ ಅವನ ಮೈಕಟ್ಟನ್ನು ಸೊಕ್ಕಿದ ಹೋರಿಗೆ ಹೋಲಿಸುವ ಬದಲು ಕೊಬ್ಬಿದ ಹಂದಿಗೆ ರೂಪಕಗಳನ್ನು ಬಳಸಿ ಕೀಳಾಗಿ ಬಿಂಬಿಸಲಾಗಿದೆ.

ಕೆಳವರ್ಗದ ಸ್ತ್ರೀಯರು ಮೇಲ್ವರ್ಗದ ಪುರುಷನೊಂದಿಗೆ ಸಂಬಂಧವನ್ನು ಅಕ್ರಮ ಎಂದು ಹೇಳುವುದಾದರೆ..!

ಕೆಳವರ್ಗದ ಪುರುಷ ಮೇಲ್ವರ್ಗದ ಸ್ತ್ರೀಯೊಂದಿಗೆ ಸಂಬಂಧ ಸಕ್ರಮ ಎನ್ನಬೇಕೆ..? 
ಒಂದು ವೇಳೆ ಇಬ್ಬರ ನಡುವಿನ ಅಂತರ ಮನಸ್ಸುಗಳ ಸಮ್ಮಿಲನವನ್ನು, ಸಂಪ್ರದಾಯಸ್ಥ ಕೌಟುಂಬಿಕ ಸಾಮಾಜಿಕ ಕಟ್ಟಳೆಗಳ ಬಾಹಿರ ಎಂದು ಪೋಷಕರು ಅವರ ಮರ್ಯಾದ ಹತ್ಯೆಗೆ ಸಂಚು ಮಾಡುವ .ತಮ್ಮ ಶತಮಾನದ ಸಿಟ್ಟನ್ನು ಶಮನಗೊಳಿಸಿ ಕೊಳ್ಳಲು ಗ್ರಾಮದೇವತೆ ಆಚರಣೆಯ ಭಾಗವಾಗಿ "ಕೋಣ ಕಡಿಯುವ ಪರಿಕಲ್ಪನೆ"  ಕೊಡುವಂತಹ ಸಂಪ್ರದಾಯಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುತ್ತಾ ವಾಸ್ತವವನ್ನು ಮರೆಮಾಚುತ್ತಾ ಅಂತರವನ್ನು ಜೀವಂತವಾಗಿರಿಸಿದೆ.

"ಕೆಳವರ್ಗದ ಪುರುಷ ಮೇಲ್ವರ್ಗದ ಸ್ತ್ರೀಯೊಂದಿಗೆ ಸಂಬಂಧ" ಇಂತಹ ಘಟನೆಗಳು ಸಾಹಿತ್ಯದಲ್ಲಿ ಚಿತ್ರಿತವಾಗಿರುವುದು ತುಂಬಾ ವಿರಳ.
ಮೇಲ್ವರ್ಗದ ಸ್ತ್ರೀಯರು ಕೆಳವರ್ಗದ ಪುರುಷರನ್ನು ಸಂಬಂಧಕ್ಕಾಗಿ ಹಾತೊರೆಯುವುದು ಹಣಕ್ಕಾಗಿ ಅಲ್ಲ .
"ಅತೃಪ್ತ ಲೈಂಗಿಕ ಬಯಕೆಗಳು ಹಿತಾಸಕ್ತಿಯ ಪೂರೈಕೆಗಾಗಿ...ಸಂತಾನಕ್ಕಾಗಿ".


ಹಸಿವು ಆಹಾರ ಮೈಥುನ ಇವು ಮಾನವನ ಪ್ರಾಣಿ ಸಹಜ ಪ್ರಕೃತಿ ಬಯಕೆಗಳು.ಸಾಮಾಜಿಕ ನೀತಿ ನಿಯಮ ನಾಗರಿಕ ಪ್ರಜ್ಞೆ, ಆಧುನಿಕ ವೈವಾಹಿಕ ಜೀವನ ಪದ್ಧತಿ ,ಕಾನೂನಿನಿಂದಾಗಿ ಸಮಾಜದ ಸ್ವಾಸ್ಥ್ಯಕ್ಕಾಗಿ ಹಲವು ನಿಯಮಗಳನ್ನು ಮಾನವ ತನಗಾಗಿ ರೂಪಿಸಿಕೊಂಡಿದ್ದಾನೆ. ನಿಯಮಬಾಹಿರವಾಗಿ ವರ್ತಿಸಿದರೆ ಕಾನೂನಿನ ಮೂಲಕ ಶಿಕ್ಷೆ ವಿಧಿಸಿ ಅವನ ಪ್ರಾಣಿ ಸಹಜ   ಪ್ರವೃತ್ತಿಗೆ ಕಡಿವಾಣ ಹಾಕಲಾಗಿದೆ. 

ಇದಕ್ಕೆ ನಿದರ್ಶನವೆಂಬಂತೆ ಪ್ರಾಚೀನ ಕಾಲದಲ್ಲಿ ವೈವಾಹಿಕ ಜೀವನ ಪದ್ಧತಿಯನ್ನು ಕಾಣಬಹುದು
"ತಾಯಿ ಎಂಬುದು ವಾಸ್ತವ; ತಂದೆ ಎಂಬುದು ನಂಬಿಕೆ"
ಇಲ್ಲಿ ಈಡಿಪಸ್ ಕಾಂಪ್ಲೆಕ್ಸ್ ಮತ್ತು ಎಲೆಕ್ಟ್ರಾ ಕಾಂಪ್ಲೆಕ್ಸ್ ಚಹರೆ ಕಾಣಬಹುದು.

ಇಂದಿನ ಆಧುನಿಕ ಜೀವನಶೈಲಿಯ ವೈವಾಹಿಕ ಪದ್ಧತಿಗಳು ಸಹ ಕೆಲವು ಬುಡಕಟ್ಟು ಅಲೆಮಾರಿ ಜನಾಂಗಗಳಲ್ಲಿ ಒಂದು ಹೆಣ್ಣನ್ನು ಇಬ್ಬರು ಪುರುಷರು ವಿವಾಹವಾಗುವುದನ್ನು ಕಾಣಬಹುದು. ಅದಕ್ಕೆ  ಆಸ್ತಿ ಆರ್ಥಿಕತೆ ಬಡತನ ಹಲವು ಕಾರಣಗಳಿವೆ.

ಸಿಗ್ಮಂಡ್ ಫ್ರಾಯ್ಡ್ ಅವರು ಮಾನವನ ಅನೈತಿಕ ಲೈಂಗಿಕ ಬಯಕೆಗಳು ಕುರಿತು "ಸುಪ್ತಾವಸ್ಥೆ, ಅರೆ ಜಾಗೃತಾವಸ್ಥೆ, ಜಾಗೃತಾವಸ್ಥೆ" ಎಂಬ ಮನಸ್ಸಿನ ಮೂರು ಪರಿಕಲ್ಪನೆಗಳನ್ನು ನೀಡಿದ್ದಾನೆ.
ಇವನ ಪ್ರಕಾರ ನೋಡುವುದಾದರೆ ಪ್ರತಿಯೊಬ್ಬ ವ್ಯಕ್ತಿಯು ಅಕ್ರಮ ಸಂಬಂಧ ಬಯಸುವವನು. ತನ್ನ ಬಯಕೆಗಳು ವಾಸ್ತವದಲ್ಲಿ ಈಡೇರದಿದ್ದಾಗ ಅವುಗಳನ್ನು ಕೆಲವು ಕನಸುಗಳ ಮೂಲಕ (ಸುಪ್ತಪ್ರಜ್ಞೆ), ಹಗಲುಗನಸುಗಳು ಮೂಲಕ (ಅರೆ ಪ್ರಜ್ಞಾವಸ್ಥೆ) 
ಕೆಲ ಸಂದರ್ಭಗಳಲ್ಲಿ ತನ್ನ ಬಯಕೆ ಪೂರೈಸಿಕೊಳ್ಳುವ ಆತುರತೆಯಲ್ಲಿ  ಅಪರಾಧಿಯಾಗುತ್ತಾನೆ. (ಜಾಗೃತಾವಸ್ಥೆಯಲ್ಲಿ ಇದ್ದರೂ ಸುಪ್ತ ಪ್ರಜ್ಞೆಯ ಪ್ರಚೋದನೆಯಿಂದಾಗಿ) . ಸಾಹಿತ್ಯದಲ್ಲಿ ತನ್ನ ಸಂವೇದನೆಗಳನ್ನು ಅಭಿವ್ಯಕ್ತಗೊಳಿಸುವುದರ ಮೂಲಕ ತನ್ನ ಬಯಕೆಗಳನ್ನು ಹತ್ತಿಕ್ಕುವ & ದಮನಗೊಳಿಸುವ ಪ್ರಯತ್ನ ಮಾಡುತ್ತಾನೆ...

ಕೆಲವು ಉದಾತ್ತ ವ್ಯಕ್ತಿಗಳು ಸಹಜವಾಗಿಯೇ ಹತ್ತಿಕ್ಕಿದ್ದಾರೆ. ಅಂತ ದುರಾಲೋಚನೆ ಭಾವಗಳ ಸೆಳೆತದಿಂದ ದೂರವುಳಿಯುತ್ತಾ ಮೋಹವನ್ನು ಗೆದ್ದು ಮೆಟ್ಟಿ ನಿಂತವರ ಸಂಖ್ಯೆ ತುಂಬ ವಿರಳ.


"ಅಕ್ರಮ ಸಂಬಂಧ" ಎಂಬ ಪರಿಕಲ್ಪನೆ ಕೇವಲ ಲೈಂಗಿಕ ದೃಷ್ಟಿಕೋನದಲ್ಲಿನ ವಿಮರ್ಶೆಗೆ ಸೀಮಿತಗೊಳಿಸಬೇಕೆ..?

ಆಧುನಿಕ ದೃಷ್ಟಿಕೋನದಲ್ಲಿ ಹೇಳುವುದಾದರೆ
ರಾಷ್ಟ್ರೀಯತೆಯ ಹೆಸರಿನಲ್ಲಿ ನೈತಿಕತೆಯ ಪರಿಕಲ್ಪನೆಯಲ್ಲಿ ಸಂಪ್ರದಾಯ ಸಂಸ್ಕೃತಿ ಧಾರ್ಮಿಕ ಆಚರಣೆಯ ಮೂಲಕ ಕೋಮುವಾದ ಭಯೋತ್ಪಾದಕತೆ ಭ್ರಷ್ಟಾಚಾರವನ್ನು ಜೀವಂತಗೊಳಿಸಿ ಚಾಲ್ತಿಯಲ್ಲಿರುವಂತೆ ಬಯಸುವ ವಿಕೃತ ಮನಸುಗಳನ್ನು "ಅಕ್ರಮ ಸಂಬಂಧದ ಸಂತಾನಗಳೆಂದೆ" ಹೇಳಬಹುದೇ..?




Tuesday, 12 May 2020

ಸಾಹಿತ್ಯ ಮತ್ತು ಮನೋವಿಜ್ಞಾನ



ಸೃಜನಶೀಲ ಪ್ರಕ್ರಿಯೆ ಮತ್ತು ಪ್ರೇರಣೆ.


ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ವ್ಯಕ್ತಿಯ ವ್ಯಕ್ತಿತ್ವದ ಮುಖ್ಯ ರೂಪ ರೇಖೆಗಳು ಬಾಲ್ಯದಲ್ಲಿ ಆಗುವ ಅನುಭವಗಳಿಂದಲೇ ರೂಪಿಸಲ್ಪಡುತ್ತದೆ.ತದನಂತರ ಬೆಳವಣಿಗೆಯು ಬಹುಮಟ್ಟಿಗೆ ಬಾಲ್ಯದಲ್ಲಿ ಗುರುತಿಸಲ್ಪಟ್ಟಿರುವ ವ್ಯಕ್ತಿತ್ವದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಬಾಲ್ಯಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಯ ದೃಷ್ಟಿಯಿಂದ ತಂದೆ-ತಾಯಿ ಮುಖ್ಯ ಪಾತ್ರವಹಿಸುತ್ತಾರೆ. ಅಂದರೆ ಅದರ ವರ್ತನೆಯನ್ನು ನಿಯಂತ್ರಿಸುತ್ತಾರೆ.ಈ ಸನ್ನಿವೇಶದಲ್ಲಿ ಗಂಡು ಮಗು ತಾಯಿಯ ಬಗ್ಗೆ ಅಮಿತವಾದ ಪ್ರೇಮ ಹಾಗೂ ತಂದೆಯ ಬಗ್ಗೆ ದ್ವೇಷ ಬಳಸಿಕೊಳ್ಳುವ ಸಂದರ್ಭವಿದೆ. ಏಕೆಂದರೆ ತಾಯಿಯ ಅವನ್ನೆಲ್ಲ ಬಯಕೆಗಳನ್ನು ತಿರೀಸುವ ಒಂದು ನೆಲೆಯಾದರೆ ಆ ನೆಲೆಯನ್ನು ಮಗುವಿನಿಂದ ಕಸಿದುಕೊಳ್ಳುವ ಕೇಂದ್ರವಾಗಿ ತಂದೆ ಕಾಣುತ್ತಾನೆ.ಈ ಸಂದರ್ಭದ ಹಿನ್ನೆಲೆಯಲ್ಲಿ ಲೈಂಗಿಕತೆಯ ಸೋಂಕು ಇದೆ ಎನ್ನುವುದು ಸಿಗ್ಮಂಡ್ ಫ್ರಾಯ್ಡ್ ನ ವಾದ. ಹೀಗೆ ಮಗು ತಾಯಿಯನ್ನು ಪ್ರೇಮಿಸುತ್ತ, ತಂದೆಯನ್ನು ದ್ವೇಷಿಸುವ ಭಾವಗಳ ಸಮುಚ್ಛಯವೇ ಈಡಿಪಸ್ ಕಾಂಪ್ಲೆಕ್ಸ್. ಹಾಗೆಯೇ ಹೆಣ್ಣು ಮಗು ತಂದೆಯನ್ನು ಪ್ರೇಮಿಸುತ್ತಾ ತಾಯಿಯನ್ನು ದ್ವೇಷಿಸುವುದು ಎಲೆಕ್ಟ್ರಾ ಕಾಂಪ್ಲೆಕ್ಸ್.


ಈ ಎರಡು ಕಾಂಪ್ಲೆಕ್ಸ್ ಗಳು ಅನೈತಿಕ ಲೈಂಗಿಕ ಉದ್ದೇಶಗಳ ಹಿನ್ನೆಲೆಯಲ್ಲಿ ರೂಪಿಸಲ್ಪಡುತ್ತದೆ ಎನ್ನುವುದು ಫ್ರಾಯ್ಡ್ ನ ವಾದ.ಸಾಮಾನ್ಯವಾಗಿ ಮಗು ಬೆಳೆಯುತ್ತಾ ಈ ಕಾಂಪ್ಲೆಕ್ಸ್ ಗಳಿಂದುಂಟಾಗುವ ಕ್ಷೋಭೆಯಿಂದ ಪಾರಾಗುತ್ತಾರೆ.ಆದರೆ ಕೆಲವೊಮ್ಮೆ ಅದು ಸಾಧ್ಯವಾಗದೆ ಈಗ ಕಾಂಪ್ಲೆಕ್ಸ್ ಗಳು ಸುಪ್ತಾವಸ್ಥೆಯಲ್ಲಿ ಪ ನಿರ್ಬಂಧಿಸಲ್ಪಟ್ಟು ವ್ಯಕ್ತಿಯ ವರ್ತನೆಯನ್ನು ಬಹಳ ಗಂಭೀರವಾಗಿಯೇ ನಿಯಂತ್ರಿಸುತ್ತವೆ. ಹಲವಾರು ವಿಧಗಳಲ್ಲಿ ಕನಸಿನಲ್ಲಿ, ಹಗಲು ಕನಸಿನಲ್ಲಿ ಹಾಗೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಉದಾತ್ತೀಕರಣಗೊಂಡು ಸಾಹಿತ್ಯದ ರೂಪದಲ್ಲಿ ಅಭಿವ್ಯಕ್ತವಾಗುತ್ತವೆ. ಅಂದರೆ ಸೃಜನಾತ್ಮಕ ಕ್ರಿಯೆಗೆ ಪ್ರೇರಣೆಯಾಗುತ್ತದೆ ಆದುದರಿಂದ ಒಂದು ಅನೈತಿಕ ಲೈಂಗಿಕ ಕಂಪ್ಲೆಕ್ಸ್ ಸೃಷ್ಟಿಕ್ರಿಯೆಗೆ ಪ್ರೇರಣೆಯಾಗಿ ಪರಿಣಮಿಸುತ್ತದೆ.

ಈಡಿಪಸ್ ಕಾಂಪ್ಲೆಕ್ಸ್ ವಿಶ್ವ ಸಾಹಿತ್ಯದಲ್ಲಿರುವ ಕೆಲವು ಅತ್ಯುತ್ತಮ ಕೃತಿಗಳಿಗೆ ಹೇಗೆ ಪ್ರೇರಕವಾಗಿ ಇರಬಹುದೆಂದು ಫ್ರಾಯ್ಡ್ ವಿವರಿಸಿದ್ದಾನೆ.ಈಡಿಪಸ್ ಕಾಂಪ್ಲೆಕ್ಸ್ ನೇರವಾಗಿ ಪ್ರಕಟವಾಗಿರುವ ಗ್ರೀಕ್ ನಾಟಕಕಾರರ ಸೋಪೋಕ್ಲಿಸ್ ನ "ಈಡಿಪಸ್ ರೆಕ್ಸ್" ನಾಟಕವನ್ನು ವಿಶ್ಲೇಷಿಸಿದ್ದಾನೆ. ಈ  ನಾಟಕದ ದುರಂತ ನಾಯಕ ಈಡಿಪಸ್ ಥೀಬ್ಸ್ ದೇಶದ ದೊರೆಯಾದ ಲೇಯಸ್ ಮತ್ತು ಅವನ ರಾಣಿ ಜೊಕಾಸ್ತರ ಮಗ. ಈಡಿಪಸ್ ಅವನ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗುತ್ತಾನೆಂದು, ಅವನು ಹುಟ್ಟಿದಾಗ ಅರೇಕಲ್  ಭವಿಷ್ಯ ನುಡಿಯುತ್ತದೆ.ಕಥೆ ಬೆಳೆದ ಹಾಗೆ ಸಂದರ್ಭಗಳು ಬೆಳೆದು ಇಡಿಪಸ್ ತಂದೆಯನ್ನು ಕೊಂದು ತಾಯಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯುತ್ತಾನೆ. ನಿಜ ವಿಷಯ ತಿಳಿದಾಗ ತನ್ನ ಕಣ್ಣುಗಳನ್ನು ಕಿತ್ತು ಹಾಕಿಕೊಂಡು ದೇಶ ಬಿಟ್ಟು ತೊಲಗು ತಾನೆ.

ಹಾಗೆಯೇ "ದೋಸ್ತೋವಸ್ಕಿ"ಯ 'ಬ್ರದರ್ಸ್ ಕರಮಜಾವ್' ಕಾದಂಬರಿಯನ್ನು ವಿಶ್ಲೇಷಿಸಿ ದೋಸ್ತೋವಸ್ಕಿಗೆ ಪಿತೃಹತ್ಯೆ ಕಾಂಪ್ಲೆಕ್ಸ್ ಅವನ ವ್ಯಕ್ತಿತ್ವದಲ್ಲಿ  ಬಹಳ ಬಲವಾಗಿತ್ತು ಎಂದು ಹೇಳುತ್ತಾನೆ. ಬ್ರದರ್ಸ್ ಕರಮಜಾವ್ ನಲ್ಲಿರುವ ದಿಮಿತ್ರಿ ಪಾತ್ರ ದೋಸ್ತೋವಸ್ಕಿಗೆ ಇದ್ದ ಮೂರ್ಛೆ ರೋಗವನ್ನು ಪಡೆದಿದ್ದು ತನ್ನ ತಂದೆಯನ್ನು ಕೊಲ್ಲುತ್ತಾನೆ.ಈ ಕೊಲೆಯ ರಚನೆಯಿಂದಾಗಿ ಮುಖ್ಯವಾಗಿ ದಿಮಿತ್ರಿ ಯ ಪಾತ್ರ ರಚನೆಯಿಂದಾಗಿ ದೋಸ್ತೋವಸ್ಕಿ ತನ್ನ ಮಾನಸಿಕ ದುಗುಡ ಕಡಿಮೆ ಮಾಡಿಕೊಂಡನೆಂದು ಹೇಳುತ್ತಾನೆ. ಹಾಗೆಯೇ ಅವನು ಬಹಳ ವರ್ಷಗಳಿಂದ ಈ ಕೃತಿ ರಚನೆಗಾಗಿ ಮಾನಸಿಕ ಸಿದ್ಧತೆ ನಡೆಸಿದ್ದನೆಂದು ಹೇಳುತ್ತಾನೆ.

"ಬ್ರದರ್ಸ್ ಕರಮಜಾವ್" ಬರೆಯುವುದು ದೋಸ್ತೋವಸ್ಕಿಗೆ ಉದ್ವೇಗ ನಿವಾರಣೆಯ ದೃಷ್ಟಿಯಿಂದ ಬಹಳ ಅವಶ್ಯವಾಗಿತ್ತು.ಏಕೆಂದರೆ ದೋಸ್ತೋವಸ್ಕಿಯ ತಂದೆಯ ಕೊಲೆ ಇವನ ಪಿತೃ ಹತ್ಯೆ ಪ್ರವೃತ್ತಿ ಬಹಳ ಪ್ರಬಲವಾಗಿದ್ದಾಗ ನಡೆದಿತ್ತು. ಬ್ರದರ್ಸ್ ಕರಮಜಾವ್ ದಲ್ಲಿ ದಿಮಿತ್ರಿಯನ್ನು ದೋಸ್ತೋವಸ್ಕಿ  ಸೃಷ್ಟಿಸಿದ ಬಗ್ಗೆ ಕುರಿತು ಫ್ರಾಯ್ಡ್ ಹೇಳುತ್ತಾನೆ.

ಇದೇ ಪಿತೃ ಹತ್ಯೆ ಕಾಂಪ್ಲೆಕ್ಸ್ ಸೆಕ್ಸ್ಪಿಯರ್ ನ "ಹ್ಯಾಮ್ಲೆಟ್" ನಾಟಕದಲ್ಲಿ ಪರೋಕ್ಷವಾಗಿ ಮಾರ್ಮಿಕವಾಗಿ ಅಭಿವ್ಯಕ್ತವಾಗಿದೆ ಎನ್ನುವುದು ಫ್ರಾಯ್ಡ್ ನ ಅಭಿಪ್ರಾಯ.ಅವನ ವಿಶ್ಲೇಷಣೆಯ ಪ್ರಕಾರ ಹ್ಯಾಮ್ಲೆಟ್ ತನ್ನ ತಂದೆಯನ್ನು ಕೊಂದು ಕ್ಲಾಡಿಯಸ್ ನನ್ನು ಕೊಲ್ಲುವಲ್ಲಿ ಬಹಳ ವಿಳಂಬ ಮಾಡುತ್ತಾನೆ.ಈ ವಿಳಂಬವನ್ನು ವಿವರಿಸುವಲ್ಲಿ ಫ್ರಾಯ್ಡ್ ಹ್ಯಾಮ್ಲೆಟ್ ಗೆ ತನ್ನ ತಂದೆಯನ್ನು ಕೊಲ್ಲುವ ಇಚ್ಛೆ ಸುಪ್ತಾವಸ್ಥೆಯಲ್ಲಿ ಇತ್ತು ಮತ್ತು ತನ್ನ ಇಚ್ಛೆಯನ್ನು ನೆರವೇರಿಸಿದ ಕ್ಲಾಡಿಯಸ್ ನನ್ನು ಕೊಲ್ಲುವುದು ಹೇಗೆ ಎನ್ನುವ ಪೇಚಿನಲ್ಲಿ ಸಿಕ್ಕಿರುತ್ತಾನೆನ್ನುವ ನಿಲುವು ತಾಳುತ್ತಾನೆ. ಹಾಗೂ ಈ ವಿಶ್ಲೇಷಣೆಯನ್ನು ಮುಂದುವರಿಸಿ ಅರ್ನೆಸ್ಟ್ ಜೋನ್ಸ್ ತನ್ನ "ಹ್ಯಾಮ್ಲೆಟ್ ಮತ್ತು ಇಡಿಪಸ್" ಎನ್ನುವ ಲೇಖನದಲ್ಲಿ ಹ್ಯಾಮ್ಲೆಟ್ ಮತ್ತು ಆ ಪಾತ್ರವನ್ನು ಸೃಷ್ಟಿಸಿದ ಶೇಕ್ಸ್ಪಿಯರ್ ಇಬ್ಬರು ಈಡಿಪಸ್ ಕಾಂಪ್ಲೆಕ್ಸ್ ನಿಂದ ಪ್ರೇರಿತರಾಗಿದ್ದಾರೆನ್ನುವ ಫ್ರಾಯ್ಡ್ ನ ಥೀಸಿಸ್ ಅನ್ನು ಸಮರ್ಥಿಸುವ ಆಧಾರಗಳನ್ನು ಕೊಟ್ಟಿದ್ದಾನೆ.


ಲಿಯೋನಾರ್ಡ್ ಡಾ ವಿಂಚಿಯ ಕಲೆಯನ್ನು ವಿಶ್ಲೇಷಿಸುವಾಗ ಫ್ರಾಯ್ಡ್ ನ ನಿಲುವು ಹೀಗೆಯೇ ಇದೆ; ಅವನು ಮೊನಾಲಿಸಾಳ ಚಿತ್ರ ತೆಗೆಯಬೇಕಾದರೆ ಆ ಚಿತ್ರಕ್ಕೆ ತನ್ನ ಬಾಲ್ಯಾವಸ್ಥೆಯಲ್ಲಾದ  ಕೆಲವು ಅನುಭವಗಳು (ಸುಪ್ತಾವಸ್ಥೆಯಲ್ಲಿ ಅದುಮಿಕ್ಕಲ್ಪಟ್ಟಿರುವಂತಹವು ಅವನಿಗೆ ತಾನು ಮಗುವಿದ್ದಾಗ ತನ್ನ ತಾಯಿಯ ಮೇಲೆ ಅಮಿತವಾದ ಪ್ರೇಮ ಹಾಗೂ ಅವಳ ಆಕರ್ಷಕವಾದ ನಗುವಿನಿಂದ ಅವನ ಶೈಶವಾವಸ್ಥೆಯ ಲೈಂಗಿಕ ಅಭಿಲಾಷೆಗಳು ಎಚ್ಚೆತ್ತುಕೊಳ್ಳುತ್ತಿದ್ದ ಸ್ಥಿತಿಗಳು)  ತಮ್ಮ ಪ್ರಭಾವವನ್ನು ಬೀರಿ ಮೊನಾಲಿಸ ಅತ್ಯಂತ ಆಕರ್ಷಕ ನಗುವಿನೊಡನೆ ಚಿತ್ರಿಸಲ್ಪಟ್ಟಿದ್ದಾಳೆ.

ಒಟ್ಟಿನಲ್ಲಿ ಸಿಗ್ಮಂಡ್ ಫ್ರಾಯ್ಡ್ನ ವಿಶ್ಲೇಷಣೆಯಲ್ಲಿ ಸುಪ್ತಚೇತನದ ಅತೃಪ್ತ ಆಕಾಂಕ್ಷೆಗಳು ಅನೈತಿಕ ಲೈಂಗಿಕ ಬಯಕೆಗಳು ಸಾಹಿತ್ಯಕ್ಕೆ ಪ್ರೇರಣೆಯಾಗಿವೆ ಅವು ಕೆಲಸ ಮಾಡುವ ಬಗೆಯನ್ನೂ ಸಹ ವಿಶ್ಲೇಷಿಸಿದ್ದಾನೆ.ಕಲಾಕಾರ ತನ್ನ ದೈನಂದಿನ ಬದುಕಿನಲ್ಲಿ ಯಾವುದೇ ಒಂದು ತೀವ್ರವಾದ ಅನುಭವಕ್ಕೆ ಗುರಿಯಾಗುತ್ತಾನೆ. ಅನುಭವದ ತೀವ್ರತೆಯ ಅವನ ಸುಪ್ತಾವಸ್ಥೆಯಲ್ಲಿರುವ ವಿಷಯಗಳ ಮೇಲೆ  ಆಧರಿಸಲ್ಪಟ್ಟಿದೆ. ಇಂತಹ ಅನುಭವ ಅವನ ಬಾಲ್ಯದಲ್ಲಿ ಅದುಮಿಕ್ಕಲ್ಪಟ್ಟು ಯಾವುದು ಲೈಂಗಿಕ ಆಸಕ್ತಿಯನ್ನು ಹೊಡೆದೆಬ್ಬಿಸುತ್ತದೆ. ಮಾನಸಿಕ ಕ್ಷೋಭೆ ಉಂಟಾಗುತ್ತದೆ. ಇದರಿಂದ ಉಂಟಾಗುವ ಉದ್ವೇಗದಿಂದ ಉಪಶಮನ ಹೊಂದಲು ಸುಪ್ತಾವಸ್ಥೆಯಲ್ಲಿ ಅದುಮಿಕ್ಕಲ್ಪಟ್ಟ ವಿಷಯಗಳನ್ನು ತನ್ನ ಕಲೆಯ ಮೂಲಕ ಹೊರಹಾಕುತ್ತಾನೆ. ರೂಪಾಂತರಗೊಂಡ ಬಯಕೆಗಳು ಓದುಗನಗೂ ಸ್ವೀಕಾರ ರ್ಹವಾಗಿ ಕಾಣುತ್ತದೆ. ಏಕೆಂದರೆ ಓದುಗನ ಸುಪ್ತಾವಸ್ಥೆಯೂ ಹೆಚ್ಚುಕಡಿಮೆ ಕಲಾಕಾರನ ಸುಪ್ತಾವಸ್ಥೆಯಂತೆಯೇ  ಅತೃಪ್ತ ಬಯಕೆಗಳ ಆಗರ. ಆದುದರಿಂದ ಕಲೆಯ ರೂಪದಲ್ಲಿ ಹೊರಬಂದ ಈ ಅನೈತಿಕ ಲೈಂಗಿಕ ಬಯಕೆಗಳು ಓದುಗನಿಗೂ ಒಂದು ತರವಾದ ಆನಂದವನ್ನೀಯುತ್ತದೆ.ಮೇಲಾಗಿ ಓದುಗನ ದೃಷ್ಟಿಯಿಂದ ತನ್ನ ಸುಪ್ತಾವಸ್ಥೆಯನ್ನು  ಬೇರೆಯವನು ಅಂದರೆ ಕಲಾಕಾರ ಹೊರುಗಿಡುತ್ತಿರುವುದರಿಂದ ಮಾನಸಿಕ ಕ್ಷೋಭೆ ಅಥವಾ ಭಯ ಇರುವುದಿಲ್ಲ. ಒಂದು ವಿಧವಾಗಿ ತನ್ನ ಸುತ್ತ ವಸ್ಥೆಯ ಬಯಕೆಗಳನ್ನು ಓದುಗ ತನ್ನದೆಂದು ಒಪ್ಪಿಕೊಳ್ಳಬೇಕು ಕಲೆಯನ್ನು ಆಸ್ವಾದಿಸುವುದರ ಮೂಲಕ ತೀರಿಸಿಕೊಳ್ಳುತ್ತಾನೆ. ಆದುದರಿಂದ ಸಾಹಿತ್ಯ ಅವನಿಗೆ ಬಹಳ ಇಷ್ಟವಾಗುತ್ತದೆ.


ಗ್ರಾಮದೇವತೆಗಳು


ಡಾ. ಸಿದ್ದಲಿಂಗಯ್ಯ ಅವರು ಪಿ.ಎಚ್. ಡಿ ಪದವಿಗಾಗಿ ಬರೆದ ಸಂಶೋಧನ ಪ್ರಬಂಧ "ಗ್ರಾಮದೇವತೆಗಳು" ಜಾನಪದೀಯ ಅಧ್ಯಯನ‌.

"ಗ್ರಾಮದೇವತೆಗಳ ಪರಿಕಲ್ಪನೆ" ಎಂಬ ಎರಡನೇ ಅಧ್ಯಯನದಲ್ಲಿನ ಕೆಲವು ಪ್ರಮುಖ ಅಂಶಗಳು.

✓  ಜೀಗನ್ ಬಾಲ್ಗ್ 
ಕೆಳ ಜಾತಿ ವರ್ಗಗಳ ದೇವತೆಗಳ ಬಗೆಗಿನ ಬಾಲಿಶ ನಂಬಿಕೆಗಳು ಕ್ರೂರವಾದ ಆಚರಣೆಗಳನ್ನು ಬಯಲುಮಾಡಿ ಈ ಜನ ವರ್ಗಗಳನ್ನು ಮತಾಂತರಗೊಳಿಸುವುದು ಅಧ್ಯಯನದ ಒಂದು ಉದ್ದೇಶವಾದರೆ. ಇಲ್ಲಿಯ ಜನಪದರ ದೇವತೆಗಳನ್ನು ಯುರೋಪಿಯನ್ನರಿಗೆ ಪರಿಚಯಿಸುವುದು ಇನ್ನೊಂದು ಉದ್ದೇಶ.
ಶಿಷ್ಟ ವರ್ಗದ ಜನ ಗ್ರಾಮದೇವತೆಗಳನ್ನು ಅಂದು ಕ್ಷುದ್ರ ದೇವತೆಗಳೆಂದು ಭಾವಿಸಿದ್ದರು.

✓  ಮಿಲ್ಟರ್ ಥಿಯೋಡಾರ್ ಎಲ್ಮೋರ್ "ಆಧುನಿಕ ಹಿಂದೂ ಧರ್ಮದಲ್ಲಿ ದ್ರಾವಿಡ ದೇವತೆಗಳು"

ಇದುವರೆಗೆ ಹಿಂದೂ ಧರ್ಮದ ಅಧ್ಯಯನದಲ್ಲಿ 80 ಭಾಗ ದೇವತೆಗಳನ್ನು ಕಡೆಗಣಿಸಲಾಗಿದೆ.ಇವುಗಳ ಬಗ್ಗೆ ಚರ್ಚೆ ಒಂದು ಅಥವಾ ಎರಡು ಪುಟ ಇದ್ದರೆ ಅದೇ ಹೆಚ್ಚು ಆದರೆ ವೈದಿಕ ದೇವತೆಗಳ ಚರ್ಚೆಗೆ ವಿಶೇಷ ಗಮನ ಕೊಡಲಾಗಿದೆ.
•ದ್ರಾವಿಡರು ಅನಕ್ಷರಸ್ಥರಾಗಿರುವುದೂ
•ಈ ಪಂಥಗಳಿಗೆ ನಿರ್ದಿಷ್ಟವಾದ ಒಬ್ಬ ಸ್ಥಾಪಕನಾದ ಪೌರಾಣಿಕ ನಾಯಕ ನಿಲ್ಲದಿರುವುದು.
•ತೌಲನಿಕ ಧರ್ಮಗಳ ವಿಭಾಗಕ್ಕೆ ಸೇರಿಸದೆ ಮನಶಾಸ್ತ್ರ ವಿಭಾಗಕ್ಕೆ ಸೇರಿಸಿದ್ದು ಕಡೆಗಣನೆಗೆ ಒಳಗಾಗಲು ಕಾರಣವಾಗಿದೆ.

✓  ಎನ್.ಎನ್ ಭಟ್ಟಾಚಾರ್ಯ ಮತ್ತು ಶ್ರೀವಾಸ್ತವ ಅವರು ಗ್ರಾಮದೇವತೆಗಳನ್ನು ಕುರಿತು ಆಳವಾಗಿ ಚಿಂತಿಸಿದ್ದಾರೆ ಇವರಿಬ್ಬರಿಗೂ ರಚಿತವಾಗಿದ್ದರೂ ಗ್ರಾಮದೇವತೆಗಳನ್ನು ಕುರಿತ ಚರ್ಚೆ ಅಲ್ಲಿ ವ್ಯಾಪಕವಾಗಿದೆ.

ಡಾ ಚೆನ್ನಣ್ಣ ವಾಲೀಕಾರರು ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳು (ಅಪ್ರಕಟಿತ) ಎಂಬ ಸಂಶೋಧನಾ ಪ್ರಬಂಧವನ್ನು ಬರೆದರು. ಇದರಲ್ಲಿ ಗ್ರಾಮದೇವತೆಯ ಆರಾಧನೆಯಿಂದ ಗ್ರಾಮ ಜೀವನದ ಮೇಲೆ ಆಗುವ ಪರಿಣಾಮಗಳು ಮತ್ತು ದುಷ್ಪರಿಣಾಮಗಳನ್ನು ಅವರು ದಾಖಲಿಸಿದ್ದಾರೆ.




✓  ಗ್ರಾಮದೇವತೆಯ ಪರಿಕಲ್ಪನೆ

ಮಾತೃದೇವತಾ ಪಂಥದ ಜನಪದ ರೂಪಗಳೇ ಗ್ರಾಮದೇವತೆಗಳು. ಭಯ-ಭಕ್ತಿ ಭೀತಿಯಿಂದ ಹುತ್ತ ರಕ್ಷಾ ಶಿಲೆಗಳನ್ನು ಆರಾಧಿಸುತ್ತಿದ್ದ ಗ್ರಾಮೀಣರು ಒಂದು ಕಾಲಘಟ್ಟದಲ್ಲಿ ಅವುಗಳಲ್ಲಿ ಗ್ರಾಮದೇವತೆಗಳನ್ನು ಕಂಡುಕೊಂಡರು. ತಮ್ಮ ಜೀವನದ ಅನುಭವದಿಂದಲೇ ಹುಟ್ಟಿದ್ದ ಪುರಾಣ ಕಥೆಗಳನ್ನು ಅವುಗಳಿಗೆ ಜೋಡಿಸಿದರು. ಅನೇಕ ಗ್ರಾಮದೇವತೆಗಳು ಅತಿ ಪ್ರಾಚೀನವಾದ ಭೂಮಿಪೂಜೆ ಅಥವಾ ಮಾತೃ ಪೂಜೆಯ ಕುರುಹುಗಳಲ್ಲದೆ ಬೇರೆಯಲ್ಲ.


ಭಾರತದಲ್ಲಿ ಕೃಷಿ ಆರ್ಥಿಕ ಚಟುವಟಿಕೆಯಾಗಿ ರೂಪುಗೊಳ್ಳುವುದರ ಜೊತೆಗೆ ಶಾಕ್ತ ಪಂಥವು ತಲೆಯೆತ್ತಿತು. ಸೆಮಿಟಿಕ್ ಜನಾಂಗದಲ್ಲಿ ಬೆಳೆದ  ಅಷ್ಟಾರ್ಟ್ ದೇವತೆಯ ಕಲ್ಪನೆ, ಈಜಿಪ್ಟ್ನಲ್ಲಿ ರೂಪಗೊಂಡ ಇಸಿನ್ ದೇವತೆಯ ಕಲ್ಪನೆ, ಫ್ರಿಜಿಯಾದಲ್ಲಿ ಸಿಬಿಲೇ ದೇವತೆಯ ಕಲ್ಪನೆ, ಭಾರತದ ಶಕ್ತಿದೇವತೆಯ ಕಲ್ಪನೆಗೆ ಸಮಾನ ಪರಿಕಲ್ಪನೆಗಳಾಗಿವೆ.
ಶಾಕ್ತ ಧರ್ಮವು ದೇವತೆಯನ್ನು ಪ್ರಪಂಚದ ಮೂಲ ಶಕ್ತಿಯ ಸಾಕಾರ ರೂಪವನ್ನು ದೈವಿಕ ಮತ್ತು ಜೈವಿಕ ಬೆಳವಣಿಗೆಯ ಮೂಲ ಶಕ್ತಿಯನ್ನಾಗಿ ಪರಿಗಣಿಸುತ್ತದೆ.
ಕೃಷಿ ಜನಾಂಗವೊಂದರ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯ ಪರಿಣಾಮವೇ ಆಗಿರಬೇಕು. ಪ್ರಾಚೀನ ಸಮಾಜಗಳಲ್ಲಿ ಮುಕ್ತ ಲೈಂಗಿಕತೆ ಇದ್ದು ಆಯಾ ಗುಂಪುಗಳ ಸ್ತ್ರೀಯರ ಮೂಲಕ ನಿಯಂತ್ರಿಸಲ್ಪಡುತ್ತಿದ್ದುದರಿಂದ ಆಗ ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಜಾರಿಯಲ್ಲಿತ್ತು. ಮಕ್ಕಳಿಗೆ ಹೆತ್ತ ತಾಯಿಯನ್ನು ಮಾತ್ರ ಗುರುತಿಸಲು ಸಾಧ್ಯವಿದ್ದು ಈ ವ್ಯವಸ್ಥೆಯ ಹುಟ್ಟಿಗೆ ಕಾರಣವಿರಬೇಕು.


ಮನುಷ್ಯನ ಪ್ರಥಮ ಆರ್ಥಿಕ ಚಟುವಟಿಕೆಯಾದ ಆಹಾರ ಸಂಗ್ರಹಣೆಯ ಹಂತದಲ್ಲಿ ಸ್ತ್ರೀಪಾತ್ರ ಪ್ರಧಾನವಾಗಿತ್ತು.ಮಕ್ಕಳನ್ನು ಹೆರುವುದಲ್ಲದೆ ಅವರನ್ನು ಪಾಲನೆ ಮಾಡುವ ಮತ್ತು ಬೆಳೆಸುವ ಹೊಣೆಗಾರಿಕೆ ಅವಳದಾಗಿತ್ತು. ಸಮಾಜದ ಬೆಳವಣಿಗೆಯ ಮೊದಲ ಹಂತದಲ್ಲಿ ಸ್ತ್ರೀಮಾತ್ರ ಧರ್ಮದ ಕೇಂದ್ರಸ್ಥಾನದಲ್ಲಿ ಇದ್ದಳು. ಆಹಾರ ಸಂಗ್ರಹಣೆ ಮತ್ತು ಆಹಾರದ ಉತ್ಪಾದನೆ ಸ್ತ್ರೀಯ ಕರ್ತವ್ಯವಾಗಿದ್ದುದರಿಂದ ಸ್ತ್ರೀಯ ಸ್ಥಾನಮಾನ ಹೆಚ್ಚಿತು. ಈ ಮಾನ್ಯತೆ ಅವಳನ್ನು ದೈವತ್ವಕ್ಕೇರಿಸುವವರೆಗೆ ಹೋಯಿತು.
ಶಾಕ್ತ ಆಚಾರಗಳು ಪ್ರಧಾನವಾಗಿ ಕೃಷಿಯ ಉತ್ಪನ್ನಗಳ ಸಮೃದ್ಧಿಗಾಗಿ ಹುಟ್ಟಿಕೊಂಡಿವೆ. ಈ ಸಾಂಸ್ಕೃತಿಕ ಹಂತದಲ್ಲಿ ಆಸ್ತಿ ಹಕ್ಕು ಹೆಣ್ಣಿನ ಒಡೆತನಕ್ಕೆ ಒಳಪಟ್ಟಿದ್ದು ಕೌಟಂಬಿಕ ತಲೆಮಾರುಗಳು ಹೆಣ್ಣಿನ ಕಡೆಯಿಂದಲೇ ಗುರುತಿಸಲ್ಪಡುತ್ತಿದ್ದವು. ಕೃಷಿಯನ್ನು ಕಂಡುಹಿಡಿದಿದ್ದು ಹೆಣ್ಣು ಎಂದು ಬಹುಪಾಲು ಮನವಶಾಸ್ತ್ರಜ್ಞರು ಒಪ್ಪುತ್ತಾರೆ.ಗಂಡು ಬೇಟೆಗೆ ಹೋಗಿದ್ದಾಗ ಆಹಾರ ಸಂಗ್ರಹಣೆಯನ್ನು ಗೃಹಕೃತ್ಯವನ್ನು ನೋಡಿಕೊಳ್ಳುತ್ತಿದ್ದ ಹೆಣ್ಣು, "ಬೀಜವು ಗಿಡವಾಗುವ ಪವಾಡವನ್ನು" ಮೊದಲು ಕಂಡಳು.

ಹೆಣ್ಣಿನ ಗರ್ಭಧಾರಣೆ ಮತ್ತು ಭೂಮಿಯ ಸಸ್ಯಧಾರಣೆ ಇವೆರಡಕ್ಕೂ ಸಾಮ್ಯತೆಯನ್ನು ಕಂಡುಕೊಂಡ ಆದಿಮಾನವ ಹೆಣ್ಣು ಮತ್ತು ಭೂಮಿ ಇವೆರಡು ಪೂಜ್ಯ ವಸ್ತುಗಳೆಂದು ಭಾವಿಸಿದ. ಸಮೃದ್ಧಿಯ ಆಚರಣೆಯಾಗಿ ಮಾಟ ರೂಪುಗೊಂಡಿತು. ಇದರ ಮುಂದುವರೆದ ರೂಪವೇ ಶಾಕ್ತ ಪಂಥ.

ಈ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ರೂಪುಗೊಂಡು ಮಾತ್ರ ದೇವತೆಗಳ ಪ್ರತಿನಿಧಿಗಳಾದ ಗ್ರಾಮದೇವತೆಗಳು ಗ್ರಾಮಗಳಲ್ಲಿ ಆರಾಧನೆಗೆ ಒಳಗಾದವು.ಸಮೃದ್ಧಿ ಆಚರಣೆಗಳೆಲ್ಲಾ ಸ್ತ್ರೀ ಸಂಬಂಧಿ ಆಚರಣೆಗಳಾಗಿದ್ದರಿಂದ ಅನೇಕ ಸಂಸ್ಕೃತಿಗಳಲ್ಲಿ ಗಂಡಿಗೆ ಆಚರಣೆಯನ್ನು, ಆಚರಣೆಯ ಸ್ಥಳಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದೆ.ಈ ತೊಡಕನ್ನು ನಿವಾರಿಸಲು ಈ ಗಂಡು ಪೂಜಾರಿಯು ಸ್ತ್ರೀವೇಷಧಾರಿ ಆಗುತ್ತಾನೆ.ಬೆಂಗಳೂರು ಕರಗ ದೇವತೆಯ ಉತ್ಸವದ ಸಂದರ್ಭದಲ್ಲಿ ಅರ್ಚಕ ನಾದವನು ಸ್ತ್ರೀವೇಷ ದಾರಿಯಾಗುತ್ತಾನೆ. ಮೂಲದಲ್ಲಿ ಕರಗ'ದ ಉತ್ಸವ ಸಮೃದ್ಧಿಯ ಆಚರಣೆಯಾಗಿ ಇರುವುದೇ ಇದಕ್ಕೆ ಕಾರಣವಾಗಿದೆ.


ಆದಿಮಾನವನ ಮನಸ್ಸಿನಲ್ಲಿ ಹೆಣ್ಣು ಮತ್ತು ಪ್ರಾಣಿ ಎರಡು ಸಂಗತಿಗಳು ವಿಶೇಷವಾದ ಆಸಕ್ತಿಯನ್ನು ಕೆರಳಿಸಿದವು.ಲೈಂಗಿಕ ಸಂತೋಷದ ಮೂಲಾಧಾರ ವಾದ್ದರಿಂದ ಹೆಣ್ಣಿನ ಬಗ್ಗೆಯೂ, ಆಹಾರ ಮೂಲವಾದ್ದರಿಂದ ಪ್ರಾಣಿಗಳ ಬಗ್ಗೆಯೂ ಆದಿಮಾನವ ನಲ್ಲಿ ಕುತೂಹಲ ಬಂದಿರಬೇಕು.
ಹೆಣ್ಣನ್ನು ಚಿತ್ರಿಸುವಾಗ ಆಕೆಯ ಸ್ತನಗಳನ್ನು, ಜಘನಗಳನ್ನೂ ಪ್ರಧಾನವಾಗಿ ಚಿತ್ರೀಕರಿಸಲಾಗಿದೆ. ಹೀಗೆ ಸ್ತ್ರೀಯರು ಆರಂಭದ ಕೃಷಿಕರು ಆದರೆ, ಪುರುಷರು ಆರಂಭದ ಕಲಾಕಾರರಾಗಿದ್ದಾರೆ.

ಸಸ್ಯವು ಬೆಳೆಯಲು ಕಾರಣವಾಗುವ ಬೀಜದ ಪಾತ್ರವನ್ನು ಮಾನವನ ಅರಿತಿರಲಿಲ್ಲ. ಹಾಗೆಯೇ ಮಗುವಿನ ಸೃಷ್ಟಿಗೆ ಕಾರಣವಾಗುವ ಪುರುಷನ ಪಾತ್ರವೂ ತಿಳಿದಿರಲಿಲ್ಲ. ಆದ್ದರಿಂದ ಸೃಷ್ಟಿಕಾರ್ಯ ಹೆಣ್ಣು ಮತ್ತು ಭೂಮಿಯಿಂದ ಮಾತ್ರ ಸಾಧ್ಯ ಎಂದು ಭಾವಿಸಲಾಗಿತ್ತು.ಮನುಷ್ಯನ ಈ ಭಾವನೆ ಸ್ತ್ರೀ ಆರಾಧನೆಗೆ ದಾರಿಮಾಡಿಕೊಟ್ಟಿತು.

ಹರಪ್ಪ ಸಂಸ್ಕೃತಿಯಲ್ಲಿ ಒಂದು ಕುತೂಹಲಕರವಾದ ಮುದ್ರೆ ಸಿಕ್ಕಿದ್ದು ಇದು ಕೃಷಿ ದೃಶ್ಯಕ್ಕೆ ಸಂಬಂಧಿಸಿದ್ದಾಗಿದೆ.ಈ ಮುದ್ರಿಕೆಯಲ್ಲಿ ಒಂದು ಸ್ತ್ರೀ ವಿಗ್ರಹವಿದ್ದು ಆಕೆಯ ಗರ್ಭದಿಂದ ಒಂದು ಸಸ್ಯವು ಹುಟ್ಟುತ್ತಿರುವಂತೆ ಚಿತ್ರಿಸಲಾಗಿದೆ. ಇದರ ಇನ್ನೊಂದು ಬದಿಯಲ್ಲಿ ಸ್ತ್ರೀ-ಪುರುಷರ ಚಿತ್ರಗಳಿವೆ.ಒಬ್ಬ ಮನುಷ್ಯನು ನೇಗಿಲಿನ ಅಂತ ಆಯುಧವನ್ನು ಹಿಡಿದಿದ್ದಾನೆ. ಈ ಚಿತ್ರದಲ್ಲಿರುವ ಮನುಷ್ಯ ಉಳುಮೆ ಮಾಡುವ ರೈತ  ಎಂದು ಭಾವಿಸಲಾಗಿದೆ. ಗರ್ಭದಿಂದ ಸಸ್ಯವು ಹೊಮ್ಮುತ್ತಿರುವ ಸ್ತ್ರೀಚಿತ್ರವನ್ನು ಮಾತೃದೇವತೆ ಎಂದು ಹೇಳಲಾಗಿದೆ ‌. ಈಕೆಯನ್ನು ಶಾಕಂಬರಿ ಎಂದು ಗುರುತಿಸುತ್ತಾರೆ.

ಭೂಮಿಯನ್ನು ಸ್ತ್ರೀಯರೊಡನೆ ಹೋಲಿಸುವುದನ್ನು ಸಂಸ್ಕೃತಿಯ ಬೇರೆ ಬೇರೆ ಹಂತದ ಚಿಂತನೆಯಲ್ಲಿ ಕಾಣಬಹುದು. ರೋಮನ್ ಕಾನೂನಿನ ಪ್ರಕಾರ ತಾಯಿ ಮತ್ತು ಮಣ್ಣು ಸಮಾನರು.ಪ್ರಾಚೀನ ಭಾರತದಲ್ಲಿ ಮದುವೆಯ ಆಚರಣೆಯಲ್ಲಿ "ಸ್ತ್ರೀಯನ್ನು ಬೀಜ ಬಿತ್ತುವ ಹೊಲ"ವೆಂದು ಕರೆಯಲಾಗುತ್ತಿತ್ತು ಮತ್ತು ಅರ್ಚಕನು ಮದುಮಗನಿಗೆ "ಅವಳ ಮೇಲೆ ನಿನ್ನ ಬೀಜವನ್ನು ಬಿತ್ತು" ಎಂದು ಹಾರೈಸುತ್ತಿದ್ದನು. ಕುರಾನಿನ ಪ್ರಕಾರ "ನಿಮ್ಮ ಹೆಂಗಸರು ನಿಮ್ಮ ಹೊಲ" ತಾಯಿಯ ಗರ್ಭ ಒಂದೇ ವಸ್ತುವಿನ ಎರಡು ರೂಪಗಳಾಗಿವೆ. "ಬೆತ್ತಲೆಯಾಗಿ ನಾನು ತಾಯಿಯ ಗರ್ಭದಿಂದ ಬಂದೆ ಬೆತ್ತಲೆಯಾಗಿ ನಾನು ಅದಕ್ಕೆ ಹಿಂತಿರುಗುವೆ". ಎಂದು ಬೈಬಲ್ ನಲ್ಲಿ ಹೇಳಲಾಗಿದೆ.


ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...