Thursday, 24 October 2024

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.


ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾದ, ಸಾವನ್ನಪ್ಪಿದವರ ಕುರಿತು....


ಯೇಸುವಿನ ಅನುಯಾಯಿಗಳು ಹೆಚ್ಚಿದಂತೆ ಅವರ ವಿರೋಧಿಗಳ ಸಂಖ್ಯೆಯು ಹೆಚ್ಚಿತು. ಧಾರ್ಮಿಕ ಮುಂದಾಳುಗಳು ಯೇಸುವನ್ನು ವಿರೋಧಿಸಿದರು. ಯೇಸು ರಾಜದ್ರೋಹಿ ಎಂಬ ತಪ್ಪು ಹೊರಿಸಿ, ಅವರನ್ನು ಶಿಲುಬೆಗೆ ಏರಿಸಿದರು.

ಕಾಲಕ್ರಮೇಣ ಪ್ರವಾದಿಯವರ ಅನುಯಾಯಿಗಳ ಸಂಖ್ಯೆ ಹೆಚ್ಚಿತು. ಆ ಕಾಲದ ಧಾರ್ಮಿಕ ಆಚಾರ ವಿಚಾರಗಳನ್ನು ಅವರು ಟೀಕಿಸಿದ್ದುದರಿಂದ ಅವರ ವಿರೋಧಿಗಳ ಸಂಖ್ಯೆ ಸಹ ಬೆಳೆಯಿತು. ಹೀಗಾಗಿ ಅವರು ಮೆಕ್ಕದಿಂದ ಮದೀನಾ ನಗರಕ್ಕೆ ಹೋಗಬೇಕಾಯಿತು.


ಕೋಪರ್ನಿಕಸನ ಕಾಲಘಟ್ಟದಲ್ಲಿ ಸೂರ್ಯನು ಭೂಮಿಯ ಸುತ್ತ ತಿರುಗುವನೆಂದು ಟಾಲೆಮಿ ಹೇಳಿದ ಮಾತೇ ಚರ್ಚಿನ ಸಿದ್ಧಾಂತವಾಗಿತ್ತು.
ಇಟಲಿಯ ಖಗೋಳ ಶಾಸ್ತ್ರಜ್ಞನಾದ ಗೆಲಿಲಿಯೋ ದೂರದರ್ಶಕವನ್ನು ಕಂಡುಹಿಡಿದನು. ಇವನು ಕೋಪರ್ನಿಕಸನ ವಾದವನ್ನು ಬಲವಾಗಿ ಪ್ರತಿಪಾದಿಸಿದನು.
ಆದುದರಿಂದ ಆ ಕಾಲದ ಸಾಂಪ್ರದಾಯಿಕ ಚರ್ಚ್ ಇವನನ್ನು ಬಂಧಿಸಿ ಚರ್ಚಿನ ನ್ಯಾಯಾಲಯಕ್ಕೆ ಒಳಪಡಿಸಿತು. ಬಲವಂತದ ತಪ್ಪೊಪ್ಪಿಗೆಯ ನಂತರ ಗೆಲಿಲಿಯೋ ನನ್ನು ಬಿಡುಗಡೆ ಮಾಡಿತು.

ವೆಸಾಲಿಯಸ್ ಎಂಬ ಬೆಲ್ಜಿಯಂ ವಿಜ್ಞಾನಿಯು ದೇಹದಲ್ಲಿ ರಕ್ತ ಸಂಚಾರದ ಬಗ್ಗೆ ಅಮೂಲ್ಯ ಗ್ರಂಥವನ್ನು ಪ್ರಕಟಿಸಿದನು. ಈ ಚಿಂತನೆ ಆಗಿನ ಸಂಪ್ರದಾಯವಾದಿಗಳ ನಂಬಿಕೆಯನ್ನು ಪ್ರಶ್ನಿಸಿದ್ದಕ್ಕಾಗಿ ಆತನನ್ನು ಮರಣದಂಡನೆಗೆ ಗುರಿಪಡಿಸಲಾಯಿತು.


ಜಾನ್ ಹಸ್ ಈತನು ಚರ್ಚಿನ ಅನೈತಿಕ ನಡುವಳಿಕೆಗಳನ್ನು ಕಟುವಾಗಿ ಪ್ರಶ್ನಿಸಿದನು. ಚರ್ಚಿನ ನ್ಯಾಯಾಲಯವು ಅವನನ್ನು ಕರೆಯಿಸಿ, ಚರ್ಚಿನ ತತ್ವಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು. ಇದಕ್ಕೆ ಪ್ರತಿಯಾಗಿ "ನನ್ನ ಆತ್ಮಸಾಕ್ಷಿಯ ವಿರುದ್ಧವಾದ ಯಾವುದೇ ವಿಚಾರಗಳನ್ನು ನಾನು ಒಪ್ಪಿಕೊಳ್ಳಲಾರೆ" ಎಂದು ಜಾನ್ ಹಸ್ ಉತ್ತರಿಸಿದ.
ಚರ್ಚ್ ಹಾಗೂ ಚರ್ಚ್ ನ್ಯಾಯಾಲಯವನ್ನು ವಿರೋಧಿಸಿದಕ್ಕಾಗಿ ಅವನನ್ನು ಅಪರಾಧಿ ಎಂದು ಸಾರಿ ಜೀವಂತವಾಗಿ ಸುಡಲಾಯಿತು..!

ಮಾರ್ಟಿನ್ ಲೂಥರ್ ಪಾಪ ಕ್ಷಮಾಪಣಾ ಪತ್ರಗಳ ಕುರಿತು 95 ಹೇಳಿಕೆಗಳನ್ನು ಬರೆದು ವಿಟೆನ್ ಬರ್ಗ್ ಚರ್ಚಿನ ಹೆಬ್ಬಾಗಿಲಿಗೆ ಹಚ್ಚಿ ಜನರಲ್ಲಿ ಜಾಗೃತಿ ಮೂಡಿಸಿದ. ಲೂಥರ್ ಸ್ವತಃ ಕ್ರಿಶ್ಚಿಯನ್ ಆಗಿದ್ದನು.
ಕ್ಯಾಥೊಲಿಕ್ ಚರ್ಚಿನವರು ಲೂಥರನ ಅನುಯಾಯಿಗಳನ್ನು "ಪ್ರಾಟೆಸ್ಟೆಂಟ್ಸ್ " (ಪ್ರತಿಭಟನಾಕಾರರು) ಎಂದು ಕರೆದರು.

ಉಳಿದದ್ದನ್ನು ಸೇರಿಸಿ..... (ಉಳಿದವರು ಕಂಡಂತೆ)

ಚಾರ್ವಾಕ, ಬುದ್ಧ, ಬಸವಣ್ಣ, ಸಾಕ್ರೆಟಿಸ್, ಗಾಂಧೀಜಿ.........

Sunday, 18 August 2024

ಬ್ರಾಹ್ಮಣ_ಧರ್ಮದ_ದಿಗ್ವಿಜಯ: ರಾಜಹತ್ಯೆ ಅಥವಾ ಪ್ರತಿಕ್ರಾಂತಿಯ ಹುಟ್ಟು

#ಬ್ರಾಹ್ಮಣ_ಧರ್ಮದ_ದಿಗ್ವಿಜಯ: 
ರಾಜಹತ್ಯೆ ಅಥವಾ ಪ್ರತಿಕ್ರಾಂತಿಯ ಹುಟ್ಟು

ಪ್ರೊ. ಬ್ಲೂಮ್ ಫೀಲ್ಡ್ - " ಹಲವು ಅರ್ಥಗಳಲ್ಲಿ ಭಾರತವು ಧರ್ಮಗಳ ನಾಡು. ಈ ನಾಡು ತನ್ನ ಒಡಲೊಳಗಿಂದ ಅನೇಕ ಪ್ರತ್ಯೇಕ ವ್ಯವಸ್ಥೆಗಳನ್ನ್ನೂ ,ಮತಪಂಥಗಳನ್ನೂ ಸೃಷ್ಟಿಸಿದೆ...."
ಭಾರತ ಧರ್ಮಗಳ ನೆಲೆವೀಡು. ಇಲ್ಲಿ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳು ಜನ ಜೀವನದೊಡನೆ ಹಾಸುಹೊಕ್ಕಾಗಿರುವಂತೆ ಬೇರೆಲ್ಲೂ ಆಗಿಲ್ಲ.
ಭಾರತದ ಚರಿತ್ರೆಯಲ್ಲಿ ಧರ್ಮ ವಯಿಸಿದಂಥ ಮಹತ್ತರ ಪಾತ್ರವನ್ನು, ಇನ್ಯಾವ ದೇಶದ ಧರ್ಮವೂ ವಹಿಸಿಲ್ಲ. ಭಾರತದ ಚರಿತ್ರೆ ಎಂದರೆ ಬೌದ್ಧ ಧರ್ಮ ಹಾಗೂ ಬ್ರಾಹ್ಮಣ ಧರ್ಮಗಳ ನಡುವಣ ಮಾರಕ ಕಾಳಗದ ಚರಿತ್ರೆಯೇ ಆಗಿದೆ. ಈ ಸತ್ಯವನ್ನು ಎಷ್ಟು ನಿರ್ಲಕ್ಷಿಸಲಾಗಿದೆ ಎಂದರೆ, ಯಾರೂ ಇದನ್ನು ತಕ್ಷಣ ಒಪ್ಪಲು ಸಿದ್ದರಾಗುವುದಿಲ್ಲ. ಅಷ್ಟೇಕೆ, ಇಂಥ ಸೂಚನೆಯನ್ನು ಅಲ್ಲಗಳಿಯುವವರಿಗೇನೂ ಬರವಿರಲಾರದು.

ಕ್ರಿಸ್ತಪೂರ್ವ ೬೪೨ ರಲ್ಲಿ ಬಿಹಾರದಲ್ಲಿ ಉದಯಿಸಿದ ಮಗಧ ಸಾಮ್ರಾಜ್ಯವೇ ಭಾರತದ ರಾಜಕೀಯ ಇತಿಹಾಸದ ಮೊದಲ ಮೈಲಿಗಲ್ಲು. ಈ ಮಗಧ ಸಾಮ್ರಾಜ್ಯವನ್ನು ಸ್ಥಾಪಿಸಿದವನು ಅನಾರ್ಯ... ನಾಗ ಜನಾಂಗಕ್ಕೆ ಸೇರಿದ ಶಿಶುನಾಗ. ಈ ವಂಶದ ಐದನೇ ದೊರೆಯಾದ ಬಿಂಬಸಾರನ ಕಾಲದಲ್ಲಿ ಇದು ಮಹಾ ಸಾಮ್ರಾಜ್ಯವಾಗಿ ಬೆಳೆಯಿತು. ಇದೇ ಶಿಶುನಾಗ ವಂಶವೂ ಕ್ರಿಸ್ತಪೂರ್ವ ೪೧೩ ರವರೆಗೆ ಈ ಸಾಮ್ರಾಜ್ಯವನ್ನು ಆಳಿತು. ಈ ವರ್ಷವೇ ಶಿಶುನಾಗ ವಂಶದ ಮಹಾನಂದ ಎಂಬ ಚಕ್ರವರ್ತಿ, ನಂದ ಎಂಬ ಸಾಹಸಿಯ ಕೈಯಲ್ಲಿ ಕೊಲೆಗೀಡಾದ. ಈ ನಂದ ಮಗಧ ಸಿಂಹಾಸನವನ್ನು ಆಕ್ರಮಿಸಿ ನಂದ ವಂಶೀಯರ ಆಳ್ವಿಕೆಯನ್ನು ಸ್ಥಾಪಿಸಿದ. ಈ ನಂದ ವಂಶದ ಮಗಧ ಸಾಮ್ರಾಜ್ಯವನ್ನು ಕ್ರಿಸ್ತಪೂರ್ವ ೩೨೨ ವರೆಗೆ ಆಳಿತು. ಕೊನೆಯ ನಂದ ದೊರೆಯನ್ನು ಚಂದ್ರಗುಪ್ತನು ಪದಚ್ಯುತಗೊಳಿಸಿ ಮೌರ್ಯ ಆಳ್ವಿಕೆಯನ್ನು ಸ್ಥಾಪಿಸಿದ. ಈ ಚಂದ್ರಗುಪ್ತನು ಶಿಶುನಾಗ ವಂಶದ ಕೊನೆ ದೊರೆಯ ಸಂಬಂಧಿಯಾದ್ದರಿಂದ ಚಂದ್ರಗುಪ್ತನ ಕ್ರಾಂತಿ, ನಾಗ ಆಳ್ವಿಕೆಯ ಮರು ಸ್ಥಾಪನೆ ಎಂದೇ ಹೇಳಬಹುದು.

ಮೌರ್ಯರು ತಮ್ಮ ದಿಗ್ವಿಜಯಗಳಿಂದ ತಾವು ಪಡೆದ ಮಗದ ಸಾಮ್ರಾಜ್ಯದ ಸರಹದ್ದುಗಳನ್ನು ಅಗಾಧವಾಗಿ ವಿಸ್ತರಿಸಿದರು. ಅಶೋಕನ ಆಳ್ವಿಕೆಯಲ್ಲಿ ಈ ಸಾಮ್ರಾಜ್ಯ ಎಷ್ಟು ವಿಶಾಲವಾದುದಾಯಿತೆಂದರೆ , ಸಾಮ್ರಾಜ್ಯಕ್ಕೆ ಇನ್ನು ಇನ್ನೊಂದೇ ಹೆಸರು ಬಂತು.
(ಇಲ್ಲಿಂದ ಹಸ್ತ ಪ್ರತಿಯ ೪ ರಿಂದ ೭ ಪುಟಗಳು ನಾಪತ್ತೆಯಾಗಿವೆ.)

ಅಶೋಕ ಅದನ್ನು ರಾಜ್ಯಧರ್ಮವಾಗಿ ಮಾಡಿದ. ಬ್ರಾಹ್ಮಣ ಧರ್ಮಕ್ಕೆ ಒದಗಿದ ಬಹುದೊಡ್ಡ ಪೆಟ್ಟು ಇದೇ. ಅಶೋಕ ಸಾಮ್ರಾಜ್ಯದಲ್ಲಿ ಬ್ರಾಹ್ಮಣರು ಎಲ್ಲಾ ರಾಜಾಶ್ರಯ ಕಳೆದುಕೊಂಡು ಎರಡನೆಯ ಹಾಗೂ ಅಧೀನ ಸ್ಥಾನಕ್ಕೆ ತಳ್ಳಲ್ಪಟ್ಟರು. ಹಾಗೆ ನೋಡಿದರೆ, ಬ್ರಾಹ್ಮಣ ಧರ್ಮದ ಜೀವಾಳವಾದ ಎಲ್ಲಾ ಬಗೆಯ ಪ್ರಾಣಿಬಲಿಯ ಯಜ್ಞಗಳನ್ನು ಅಶೋಕ ನಿಷೇಧಿಸಿದ ಸರಳ ಕಾರಣಕ್ಕೆ ಅದು ದಮನಗೊಂಡಿತೆಂದು  ಹೇಳಬಹುದು. ಬ್ರಾಹ್ಮಣರು ರಾಜಾಶ್ರಯ ಕಳೆದುಕೊಂಡಿದ್ದಷ್ಟೇ ಅಲ್ಲ, ಅವರು ಯಜ್ಞಗಳನ್ನು ಮಾಡಿ ತಮ್ಮ ಜೀವನಕ್ಕಾಗಿ ಪಡೆಯುತ್ತಿದ್ದ ದಕ್ಷಿಣೆಯನ್ನು ಕಳೆದುಕೊಂಡಿದ್ದರಿಂದ, ಅವರಿಗೆ ವೃತ್ತಿ ನಷ್ಟವು ಆದಂತಾಯಿತು. ಹಾಗಾಗಿ ಬ್ರಾಹ್ಮಣರು ಮೌರ್ಯ ಸಾಮ್ರಾಜ್ಯವಿದ್ದ ೧೪೦ ವರ್ಷಗಳ ಕಾಲ ದಮನಕ್ಕೊಳಗಾದ ನಿಮ್ನ ವರ್ಗವಾಗಿ ಜೀವಿಸಿದರು. ಆದ್ದರಿಂದ, ಕಷ್ಟ ಜೀವಿಗಳಾಗಿದ್ದ ಬ್ರಾಹ್ಮಣರಿಗೆ ಬೌದ್ಧ ರಾಜ್ಯದ ವಿರುದ್ಧ ಬಂಡಾಯ ವೇಳುವುದೊಂದೇ ಮಾರ್ಗವಾಗಿತ್ತು ಮತ್ತು ಮೌರ್ಯರ ಆಳ್ವಿಕೆಯ ವಿರುದ್ಧ ಪುಷ್ಯ ಮಿತ್ರ ನೇಕೆ ದಂಗೆಯ ಧ್ವಜ ಎತ್ತಿದನೆಂಬುದಕ್ಕೂ ವಿಶೇಷ ಕಾರಣವಿದೆ. ಪುಷ್ಯಮಿತ್ರ ಶುಂಗಗೋತ್ರದವನು. ಶುಂಗರು ಸಾಮವೇದಿ ಬ್ರಾಹ್ಮಣರಾಗಿದ್ದರು. ಅವರಿಗೆ ಪ್ರಾಣಿಬಲಿ ಹಾಗೂ ಸೋಮ ಯಜ್ಞಗಳಲ್ಲಿ ನಂಬಿಕೆ. ಅಶೋಕನ ಶಿಲಾ ಶಾಸನವು ಮೌರ್ಯ ಸಾಮ್ರಾಜ್ಯದಾದ್ಯಂತ ಪ್ರಾಣಿಬಲಿಯ ವಿರುದ್ಧ ನಿಷೇಧ  ಹೇರಿದ್ದರಿಂದ ಶುಂಗ ಬ್ರಾಹ್ಮಣರು ಸಹಜವಾಗಿಯೇ ಕುದಿಯುತ್ತಿದ್ದರು. ಹಾಗಾಗಿ ತಮ್ಮ ಅವಹೇಳನದ ಮೂಲ ಕಾರಣವಾಗಿದ್ದ ಬೌದ್ಧರಾಜ್ಯವನ್ನು ನಾಶಮಾಡಿ ಬ್ರಾಹ್ಮಣ ಧರ್ಮ ಆಚರಣೆಯ ಸ್ವಾತಂತ್ರ್ಯ ಗಳಿಸುವ ಕಲ್ಪನೆ ಸಾಮವೇದಿ ಬ್ರಾಹ್ಮಣನಾದ ಪುಷ್ಯನಿಗೆ ಬಂದಿದ್ದರಲ್ಲಿ ಆಚಾರ್ಯವೇನು ಇಲ್ಲ. 

ರಾಜ್ಯ ಧರ್ಮವಾಗಿದ್ದ ಬೌದ್ಧ ಧರ್ಮವನ್ನು ನಾಶ ಮಾಡುವುದು ಮತ್ತು ಬ್ರಾಹ್ಮಣರನ್ನೇ ಭಾರತದ ಸಾರ್ವಭೌಮ ದೊರೆಗಳನ್ನಾಗಿ ಮಾಡಿ. ಆ ಮೂಲಕ ರಾಜಕೀಯ ಅಧಿಕಾರ ಬಳಸಿ ಬೌದ್ಧ ಧರ್ಮದ ವಿರುದ್ಧ ಬ್ರಾಹ್ಮಣ ಧರ್ಮದ ವಿಜಯ ಸಾಧಿಸುವುದು ಇವೇ ಪುಷ್ಯಮಿತ್ರನ ರಾಜಹತ್ಯೆಯ ಉದ್ದೇಶವಾಗಿತ್ತೆಂದು ಸುಸ್ಪಷ್ಟವಾಗುತ್ತದೆ.
ಬೌದ್ಧ ಧರ್ಮದ ವಿರುದ್ಧ ಪುಷ್ಯ ಮಿತ್ರನ ಪೀಡನೆ ಎಷ್ಟು ನಿರ್ದಯವಾಗಿತ್ತೆನ್ನಲು ಬೌದ್ಧ ಬಿಕ್ಷುಗಳ ವಿರುದ್ಧದ ಆತನ ಘೋಷಣೆಯೇ ಸಾಕ್ಷಿಯಾಗಿದೆ. ಪ್ರತಿಯೊಬ್ಬ ಭಿಕ್ಷುವಿನ ತಲೆಗೆ ಆತ ನೂರು ಚಿನ್ನದ ನಾಣ್ಯಗಳ ಬೆಲೆ ಕಟ್ಟಿದ್ದ.

ಪುಷ್ಯ ಮಿತ್ರನ ಕಾಲದಲ್ಲಿ ಬೌದ್ಧರು ಅನುಭವಿಸಿದ ಕಿರುಕುಳದ ಬಗ್ಗೆ ಡಾ .ಹರಿಪ್ರಸಾದ್ ಶಾಸ್ತ್ರಿ ಹೀಗೆ ಹೇಳುತ್ತಾರೆ :-- ಕಂದಾಚಾರಿಗಳು, ಧರ್ಮಾಂಧರು ಆಗಿದ್ದ ಶುಂಗರ ಸಾಮ್ರಾಜ್ಯಶಾಹಿ ಪ್ರಭುತ್ವದಲ್ಲಿ ಬೌದ್ಧರು ಅನುಭವಿಸಿದ ಸ್ಥಿತಿಯನ್ನು ವಿವರಿಸುವುದಕ್ಕಿಂತ ಊಹಿಸುವುದು ಸುಲಭ. ಅನೇಕ ಬೌದ್ಧರು ಈಗಲೂ ಶಾಪವಿಲ್ಲದೆ ಪುಷ್ಯ ಮಿತ್ರನ ಹೆಸರು ತೆಗೆಯುವುದಿಲ್ಲವೆಂದು ಚೀನಿ ಮೂಲಗಳಿಂದ ತಿಳಿದುಬರುತ್ತದೆ.
ಪುಷ್ಯ ಮಿತ್ರನ ಧ್ಯೇಯ ಬೌದ್ಧ ಧರ್ಮವನ್ನು ಉಚ್ಛಾಟಿಸಿ ಅದರ ಜಾಗದಲ್ಲಿ ಬ್ರಾಹ್ಮಣ ಧರ್ಮವನ್ನು ಸ್ಥಾಪಿಸುವುದೇ ಆಗಿತ್ತೆನ್ನಲು ಇದೊಂದು ಸಾಂದರ್ಭಿಕ  ಪುರಾವೆಯಾಗಿದೆ. ಆತ     ಮನುಸ್ಮ್ಮೃತಿಯನ್ನೇ ಕಾನೂನು ಸಂಹಿತೆಯಾಗಿ ಜಾರಿಗೊಳಿಸಿದ್ದು ಇನ್ನೊಂದು ಪುರಾವೆ. ಮನುಸ್ಮ್ಮೃತಿಯು ಹೊಸ ಸಾಮ್ರಾಜ್ಯದ ಹೊಸ ಶಾಸನವಾಗಿತ್ತೆನ್ನಲು ಇಷ್ಟೇ ಸಾಕು.

ಇಡೀ ಭಾರತೀಯ ಚರಿತ್ರೆ ಮುಸ್ಲಿಂ ದಂಡೆಯಾತ್ರೆಗಳ ಪಟ್ಟಿ ಮಾತ್ರ ಎಂಬಂತೆ ತೋರ್ಪಡಿಸಲಾಗಿದೆ. ಆದರೆ ಸಂಕೋಚಕ ದೃಷ್ಟಿಕೋನದಿಂದ ನೋಡಿದಾಗ್ಯು ಕೂಡ, ಅಧ್ಯಯನಕ್ಕೆ ಅರ್ಹವಾದದ್ದು ಮುಸ್ಲಿಂ ದಾಳಿಯೊಂದೇ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರಷ್ಟೇ ಅಥವಾ ಇದಕ್ಕಿಂತ ಮುಖ್ಯವಾದ ಬೇರೆ ದಾಳಿಗಳು ಇವೆ. ಮುಸ್ಲಿಂ ದಾಳಿಕೋರುವರು ಹಿಂದೂ ಭಾರತದ ಮೇಲೆ ದಾಳಿ ಮಾಡಿದರೆ, ಬ್ರಾಹ್ಮಣ ದಾಳಿ ಕೋರರು ಬೌದ್ಧ ಭಾರತದ ಮೇಲೆ ದಾಳಿ ಮಾಡಿದರು ಮತ್ತು ಈ ಎರಡು ದಾಳಿಗಳ ನಡುವೆ ಅನೇಕ ಹೋಲಿಕೆಗಳಿವೆ. ಹಿಂದೂ ಭಾರತದ ಮೇಲೆ ದಂಡೆತ್ತಿ ಬಂದ ಮುಸ್ಲಿಂ ದಾಳಿಕೋರರು ತಮ್ಮ ವಂಶೀಯ ಆಕಾಂಕ್ಷೆಗಳಿಗಾಗಿ ತಮ್ಮ ತಮ್ಮಲ್ಲೇ ಹೊಡೆದಾಡಿದರು. ಅರಬ್ಬರು ,ತುರ್ಕರು, ಮಂಗೋಲರು ಮತ್ತು ಆಫ್ಘನರು ಪರಸ್ಪರ ಹಿರಿಮೆಗಾಗಿ ಬಡಿದಾಡಿದರು. ಆದರೆ ಮೂರ್ತಿ ಪೂಜೆಯನ್ನು ನಾಶ ಮಾಡುವುದು ಅವರೆಲ್ಲರ ಗುರಿಯಾಗಿತ್ತು. ಇದೇ ರೀತಿ ಬೌದ್ಧ ಭಾರತದ ಮೇಲೆ ದಾಳಿ ಮಾಡಿದ ಬ್ರಾಹ್ಮಣ ದಾಳಿಕೋರರು, ತಮ್ಮ ತಮ್ಮ ವಂಶದ ಹಿರಿಮೆಗಾಗಿ ಪರಸ್ಪರ ಹೊಡೆದಾಡಿಕೊಂಡರು. ಶುಂಗರೂ, ಕಣ್ವರು ಮತ್ತು ಆಂಧ್ರರು ಪರಸ್ಪರ ಮೇಲ್ಮೈಗಾಗಿ ಹೋರಾಟ ಮಾಡಿದರು. ಆದರೆ ಮುಸ್ಲಿಂ ದಾಳಿಕೋರರಂತೆ ಅವರಿಗೂ ಏಕಗುರಿ ಇತ್ತು. ಬೌದ್ಧ ಧರ್ಮ ಹಾಗೂ ಮೌರ್ಯರ ಬೌದ್ಧ ಸಾಮ್ರಾಜ್ಯವನ್ನು ನಾಶ ಮಾಡುವುದೇ ಆ ಗುರಿ. ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಕೋರರ ದಂಡೆಯಾತ್ರೆಗಳು ಚರಿತ್ರಕಾರರ ಅಧ್ಯಯನಕ್ಕೆ ಅರ್ಹವಾಗಿದ್ದರೆ, ಬೌದ್ಧ ಭಾರತದ ಮೇಲೆ ಬ್ರಾಹ್ಮಣ ದಾಳಿಕೋರರ ದಂಡೆಯಾತ್ರೆಗಳು ಅಷ್ಟೇ ಅಧ್ಯಯನ ಯೋಗ್ಯವಾಗಿವೆ. ಬೌದ್ಧ ಭಾರತದ ಬ್ರಾಹ್ಮಣ ದಾಳಿಕೊರರು ಬೌದ್ಧಧರ್ಮವನ್ನು ಅಡಗಿಸಲು ಅನುಸರಿಸಿದ ಮಾರ್ಗವಿಧಾನಗಳು, ಹಿಂದೂ ಧರ್ಮವನ್ನು ಅಡಗಿಸಲು ಮುಸ್ಲಿಂ ದಾಳಿಕೋರರು ಅನುಸರಿಸಿದ ಮಾರ್ಗ ವಿಧಾನಗಳಿಗಿಂತ ಕಡಿಮೆ ವಿಷಮಯ ಅಥವಾ ಹಿಂಸಾತ್ಮಕವಾದದ್ದೇನು ಆಗಿರಲಿಲ್ಲ. ಜನರ ಸಾಮಾಜಿಕಾಗ ಆಧ್ಯಾತ್ಮಿಕ ಜೀವನದ ಮೇಲೆ ಉಂಟಾದ ಶಾಶ್ವತ ಪರಿಣಾಮದ ದೃಷ್ಟಿಯಿಂದ ನೋಡಿದಾಗ, ಬೌದ್ಧ ಭಾರತದ್ ಮೇಲೆ ನಡೆದ ಬ್ರಾಹ್ಮಣ ದಾಳಿಗಳಿಗೆ ಹೋಲಿಸಿದರೆ, ಹಿಂದೂ ಭಾರತದ ಮೇಲೆ ಮುಸ್ಲಿಂ ದಾಳಿಗಳ ಪರಿಣಾಮ ಮೇಲುಮೇಲಿನದೂ, ಅಲ್ಪಾಯುಷಿಯಾದದ್ದೂ  ಆಗಿದೆ. ಮುಸ್ಲಿಂ ದಾಳಿ ಕೋರರು ಹಿಂದೂ ಧರ್ಮದ ದೇವಾಲಯಗಳು ಮತ್ತು ಮಠಗಳಂತ ಬಾಹ್ಯ ಸಂಕೇತಗಳನ್ನಷ್ಟೇ ನಾಶ ಮಾಡಿದರು. ಅವರು ಹಿಂದೂ ಧರ್ಮದ ಮೂಲೋತ್ಪಾಟನೆಯನ್ನು ಮಾಡಲಿಲ್ಲ; ಜನರ ಆಧ್ಯಾತ್ಮಿಕ ಜೀವನವನ್ನು ಆಳುವ ತತ್ವಗಳು ಅಥವಾ ಸಿದ್ಧಾಂತಗಳನ್ನು ಬುಡಮೇಲು ಮಾಡಲಿಲ್ಲ. ಆದರೆ ಬ್ರಾಹ್ಮಣ ದಾಳಿಯ ಪರಿಣಾಮಗಳು; ಒಂದು ಶತಮಾನ ಕಾಲ ಬೌದ್ಧ ಧರ್ಮವು ಆಧ್ಯಾತ್ಮಿಕ ಜೀವನದ ನಿಜ ಹಾಗೂ ಶಾಶ್ವತ ತತ್ವಗಳೆಂದು ಬೋಧಿಸಿ ಜನಸ್ತೋಮವು ಒಪ್ಪಿಕೊಂಡ ಜೀವನದ ರೀತಿಯಾಗಿ ಪಾಲಿಸುತ್ತಿದ್ದ ತತ್ವಗಳ ಸಾಮೂಲಾಗ್ರ ಬದಲಾವಣೆಯಾಗಿತ್ತು. 
ಹೋಲಿಕೆ ನೀಡುವುದಾದರೆ....
ಮುಸ್ಲಿಂ ದಾಳಿ ಕೋರರು ಸ್ನಾನದ ನೀರನ್ನು. ಕೇವಲ ಕಲಕಿದರು, ಅದು ಸ್ವಲ್ಪ ಸಮಯ ಮಾತ್ರ. ಆಮೇಲೆ ಈ ಕಲಕುವಿಕೆ ಸಾಕಾಗಿ, ರಾಡಿ ತಂತಾನೇ ತಿಳಿಯಾಗಲು ಬಿಟ್ಟು ಕೊಟ್ಟರು.ಹಿಂದೂ ಧರ್ಮದ ತತ್ವಗಳನ್ನು ಕೂಸು ಎಂದು ಕರೆಯಬಹುದಾದರೆ -- ಅವರು ಕೂಸನೆಂದು ಸ್ನಾನದಿಂದ ತೆಗೆದೆಸೆಯಲಿಲ್ಲ.
ಆದರೆ ಬ್ರಾಹ್ಮಣ ಧರ್ಮ - ಬೌದ್ಧ ಧರ್ಮಗಳ ಸಂಘರ್ಷ, ಚೊಕ್ಕಟ್ಟ ಗುಡಿಸುವ ಕಾಯಕವಾಗಿತ್ತು. ಅದು ಬೌದ್ದ ಕೂಸನ್ನು ನೀರಿನ ಸಮೇತ ಬರಿದು ಮಾಡಿ, ಅಲ್ಲಿ ತನ್ನ ನೀರು ತುಂಬಿ ತನ್ನ ಕೂಸನ್ನೇ ಇಟ್ಟಿತು. ತನಗೆ ಹೋಲಿಸಿದರೆ ಬೌದ್ಧ ಧರ್ಮದ ಉದಾತ್ತ ನೆಲೆಯಿಂದ ಹರಿದುಬಂದ ನೀರು ಎಷ್ಟು ಶುಚಿಯಾದ ಪರಿಮಳಭರಿತ ಜಲವೆಂಬುದನ್ನು ಬ್ರಾಹ್ಮಣ ಧರ್ಮ ಕಾಣಲಿಲ್ಲ. ಬೌದ್ಧ ಕೂಸಿಗೆ ಹೋಲಿಸಿದರೆ ತನ್ನ ಕೂಸು ಎಷ್ಟು ಭೀಕರವಾದದ್ದು ಎಂಬುದನ್ನು ಕಾಣಲು ಬ್ರಾಹ್ಮಣ ಧರ್ಮ ಮನಸ್ಸು ಮಾಡಲಿಲ್ಲ. ತನ್ನ ದಂಡೆಯಾತ್ರೆಗಳ ಮೂಲಕ ಬ್ರಾಹ್ಮಣ ಧರ್ಮವು ಬೌದ್ಧ ಧರ್ಮವನ್ನು ವಿನಾಶಗೊಳಿಸುವ ರಾಜಕೀಯ ಅಧಿಕಾರ ಪಡೆಯಿತು ಮತ್ತು ಬೌದ್ಧ ಧರ್ಮವನ್ನು ನಾಶ ಮಾಡಿತು ಕೂಡಾ. ಇಸ್ಲಾಂ ಹೀಗೆ ಗುಡಿಸಿ ಸಾರಿಸಲು ಸಾಧ್ಯವಾಗಲಿಲ್ಲ. ಬ್ರಾಹ್ಮಣ ಧರ್ಮಕ್ಕೆ ಸಾಧ್ಯವಾಯಿತು. ಅದು ಒಂದು ಧರ್ಮವಾಗಿ ಬೌದ್ಧ ತತ್ವವನ್ನು ಓಡಿಸಿ ಆ ಸ್ಥಾನವನ್ನು ತಾನು ಆಕ್ರಮಿಸಿಕೊಂಡಿತು.

ಮೊದಲನೆಯದಾಗಿ - ಸಾರ್ವತ್ರಿಕ ಭಾರತೀಯ ಸಂಸ್ಕೃತಿ ಎಂಬುದೇ ಇರಲಿಲ್ಲ; ಚಾರಿತ್ರಿಕವಾಗಿ ಬ್ರಾಹ್ಮಣ ಭಾರತ, ಬೌದ್ಧ ಭಾರತ, ಮತ್ತು ಹಿಂದೂ ಭಾರತದಂಬ ಮೂರು ಭಾರತಗಳಿಗೆ.

ಎರಡನೆಯದಾಗಿ : - ಮುಸ್ಲಿಂ ದಾಳಿಗಳ ಮುಂಚಿನ ಭಾರತೀಯ ಚರಿತ್ರೆಯಂದರೆ - ಬ್ರಾಹ್ಮಣ ಧರ್ಮ ಹಾಗೂ ಬೌದ್ಧ ಧರ್ಮಗಳ ನಡುವಣ ಮಾರಕ ಸಂಘರ್ಷದ ಚರಿತ್ರೆ ಎಂಬುದನ್ನು ಗುರುತಿಸಬೇಕು. 

ಈ ಎರಡು ಸತ್ಯಗಳನ್ನು ಕಾಣಲಾರದವನು ಭಾರತದ ನೈಜ ಇತಿಹಾಸವನ್ನು ಎಂದಿಗೂ ಎಂದೆಂದಿಗೂ ಬರೆಯಲಾರ. ಇತಿಹಾಸದ ನಿಜವಾದ ಅರ್ಥ, ಉದ್ದೇಶಗಳನ್ನು ಹೊರಗಡೆಲಾರ. ಈಗ ಬರೆಯಲಾಗಿರುವ ಚರಿತ್ರೆಗೆ ತಿದ್ದುಪಡಿ ಮಾಡಿ, ಅದರ ಅರ್ಥ ಉದ್ದೇಶಗಳನ್ನು ಬಯಲಿಗೆಳೆಯುವುದಕ್ಕಾಗಿಯೇ ನಾನು, ಬೌದ್ಧ ಭಾರತದ ಮೇಲೆ ನಡೆದ ಬ್ರಾಹ್ಮಣ ದಾಳಿಗಳು ಮತ್ತು ಬೌದ್ಧ ಧರ್ಮದ ವಿರುದ್ಧ ಬ್ರಾಹ್ಮಣ ಧರ್ಮಗಳಿಸಿದ ರಾಜಕೀಯ ದಿಗ್ವಿಜಯ ಚರಿತ್ರೆಯನ್ನು ಪುನರಚಿಸಬೇಕಾಯಿತು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು. 
(ಸಂಪುಟ-೩ . ಪುಟ ಸಂಖ್ಯೆ-  ೨೮೮-೨೯೫)

Tuesday, 23 January 2024

"ಕ್ರಾಂತಿ ಮತ್ತು ಪ್ರತಿಕ್ರಾಂತಿ"

ಡಾ. ಬಿ. ಆರ್. ಅಂಬೇಡ್ಕರ್ ಅವರು "ಕ್ರಾಂತಿ ಮತ್ತು ಪ್ರತಿಕ್ರಾಂತಿ" ಎಂಬ ಪುಸ್ತಕದ ಅಂಗವಾಗಿ "ಬೌದ್ಧ ಧರ್ಮದ ಅವಸಾನ ಮತ್ತು ಪತನ" ಎಂಬ ಲೇಖನವನ್ನು ಬರೆದಿದ್ದರು. ನಮಗೆ ಕೇವಲ ಐದು ಪುಟಗಳು ಮಾತ್ರ ದೊರೆತಿವೆ. ಅವುಗಳನ್ನು ಕೂಡಾ ತಿದ್ದಿಲ್ಲ. ಈ ಪ್ರಬಂಧದ ಒಂದು ಪ್ರತಿಯು ಶ್ರೀ ಎಸ್ ಎಸ್ ರೇಗೆ ಅವರಿಂದ ದೊರೆತಿದೆ. ಅದರಲ್ಲಿ ಡಾ. ಅಂಬೇಡ್ಕರ್ ಅವರ ಕೈಬರಹದ ಕೆಲವು ತಿದ್ದುಪಡಿಗಳಿವೆ. ಈ ಪ್ರಬಂಧದಲ್ಲಿ ಬೆರಳಚ್ಚು ಮಾಡಿದ 17 ಪುಟಗಳಿವೆ. ಅದನ್ನು ಇಲ್ಲಿ ಸೇರಿಸಲಾಗಿದೆ‌.

             ~ ಸಂಪಾದಕರು


ಭಾರತದಿಂದ ಬೌದ್ಧ ಧರ್ಮವು ಅದೃಶ್ಯವಾಗಿ ಹೋದದ್ದು ಆ ವಿಷಯದ ಬಗ್ಗೆ ಕಾಳಜಿಯುಳ್ಳ ಪ್ರತಿಯೊಬ್ಬನಿಗೂ ಅತ್ಯಂತ ವಿಸ್ಮಯದ ವಿಷಯವಾಗಿದೆ ಮತ್ತು ವಿಷಾಧಕರವಾಗಿದೆ. ಆದರೆ ಅದು ಚೀನಾ, ಜಪಾನ್, ಬರ್ಮಾ, ಸಯಾಮ್, ಅನ್ನಮ್, ಇಂಡೋಚೈನಾ, ಸಿಂಹಳ ಮತ್ತು ಮಲಯ ದ್ವಿಪಕಲ್ಪದ ಕೆಲಭಾಗಗಳಲ್ಲಿ ಇಂದಿಗೂ ಜೀವಂತವಿದೆ. ಭಾರತದಲ್ಲಿ ಅದು ಅಸ್ತಿತ್ವದಲ್ಲಿ ಇಲ್ಲವಷ್ಟೇ ಅಲ್ಲ, ಬುದ್ಧನ ಹೆಸರೂ ಬಹು ಸಂಖ್ಯಾತ ಹಿಂದುಗಳ ಸ್ಮರಣೆಯಲ್ಲಿ ಉಳಿದಿಲ್ಲ. ಇಂತಹ ಸಂಗತಿ ಹೇಗೆ ಸಂಭವಿಸಿರಬಹುದು.? ಇದೊಂದು ಮಹತ್ವದ ಪ್ರಶ್ನೆ. ಇದಕ್ಕೆ ಸಮಾಧಾನಕರ ಉತ್ತರ ಇನ್ನೂ ದೊರೆತಿಲ್ಲ; ಸಮಾಧಾನಕರ ಉತ್ತರ ದೊರೆತಿಲ್ಲವಷ್ಟೇ ಅಲ್ಲ, ಸಮಾಧಾನಕರ ಉತ್ತರ ಪಡೆಯಲು ಯಾರು ಪ್ರಯತ್ನವನ್ನು ಮಾಡಿಲ್ಲ. ಈ ವಿಷಯದ ಬಗ್ಗೆ ವಿಚಾರ ಮಾಡುವಾಗ, ಒಂದು ಮಹತ್ವದ ಅಂತರವನ್ನು ಮರೆಯುತ್ತಾರೆ. ಬೌದ್ಧ ಧರ್ಮದ ಪತನ ಮತ್ತು ಬೌದ್ಧ ಧರ್ಮದ ಅವಸಾನ ಇವೆರಡರ ನಡುವಿನ ಅಂತರವೇ ಅದು. ಈ ಅಂತರವನ್ನು ಮಾಡುವುದು ಅತ್ಯವಶ್ಯವಾಗಿದೆ, ಏಕೆಂದರೆ ಬೌದ್ಧ ಧರ್ಮದ ಪತನದ ಕಾರಣಗಳು ಅತ್ಯಂತ ಸ್ಪಷ್ಟವಾಗಿದೆ. ಆದರೆ ಅದರ ಅವಸಾನದ ಕಾರಣಗಳು ಅಷ್ಟು ಸ್ಪಷ್ಟವಾಗಿಲ್ಲ.

ಭಾರತದಲ್ಲಿ ಬುದ್ಧ ಧರ್ಮದ ಪತನಕ್ಕೆ ಮುಸಲ್ಮಾನರ ದಾಳಿಗಳು ಕಾರಣವಾಗಿವೆ ಎಂಬುದರಲ್ಲಿ ಏನು ಸಂಶಯವಿಲ್ಲ. 'ಬುತ್ ' ದ ( but) ಶತ್ರುವಾಗಿ ಇಸ್ಲಾಂ ಬಂದಿತು. ಎಲ್ಲರಿಗೂ ಗೊತ್ತಿರುವಂತೆ 'ಬುತ್' ಎಂಬುದು ಅರೇಬಿಕ್ ಶಬ್ದ ಮತ್ತು ಇದರರ್ಥ "ಮೂರ್ತಿ" (ಗೊಂಬೆ ಪ್ರತಿಮೆ) ಅನೇಕರಿಗೆ 'ಬುತ್ ' ಶಬ್ದದ ವ್ಯತ್ಪತ್ತಿ ಏನೆಂಬುದು ತಿಳಿದಿಲ್ಲ. 'ಬುತ್ ' ಈ ಶಬ್ದದ ಅರೇಬಿಕ್ ಅಪಭ್ರಂಶ. ಹೀಗೆ ಮುಸಲ್ಮಾನರ ಮನಸ್ಸಿನಲ್ಲಿ ಮೂರ್ತಿ ಪೂಜೆ ಮತ್ತು ಬೌದ್ಧ ಧರ್ಮಗಳು ಅಭಿನ್ನವೆಂಬ ಕಲ್ಪನೆಯಿದೆಯೆಂದು ಶಬ್ದದ ವ್ಯತ್ಪತ್ತಿಯಿಂದ ತಿಳಿದು ಬರುತ್ತದೆ. ಮುಸಲ್ಮಾನರಿಗೆ ಅವೆರಡೂ ಒಂದೇ ಆಗಿದ್ದವು. ಹೀಗೆ ಮೂರ್ತಿ ಭಂಜನೆಯ ಕಾರ್ಯವು ಬೌದ್ಧ ಧರ್ಮವನ್ನು ನಾಶಪಡಿಸುವ ಕಾರ್ಯವಾಗಿತ್ತು. ಇಸ್ಲಾಂ ಭಾರತದಲ್ಲಿ ಮಾತ್ರವೇ ಬೌದ್ಧ ಧರ್ಮವನ್ನು ನಾಶಪಡಿಸಲಿಲ್ಲ, ಅದು ಹೋದಲ್ಲೆಲ್ಲ (ಅದನ್ನು) ನಾಶಪಡಿಸಿತು. ಇಸ್ಲಾಂ ಪ್ರಚಾರದಲ್ಲಿ ಬರುವುದಕ್ಕಿಂತ ಮೊದಲು, ಬ್ಯಾಕ್ಟ್ರಿಯಾ, ಪಾರ್ಥಿಯಾ, ಅಫ್ಘಾನಿಸ್ತಾನ್ , ಗಂಧಾರ ಮತ್ತು ಚೀಣೀ ತುರ್ಕಿಸ್ತಾನ್ ಹಾಗೂ ಸಂಪೂರ್ಣ ಏಷ್ಯಾದ ಧರ್ಮವು ಬೌದ್ಧ ಧರ್ಮವಾಗಿತ್ತು. ಈ ಎಲ್ಲ ದೇಶಗಳಲ್ಲಿ ಇಸ್ಲಾಂ ಬೌದ್ಧ ಧರ್ಮವನ್ನು ನಾಶಪಡಿಸಿತು. ವಿನ್ಸೆಂಟ್ ಸ್ಮಿತ್ ಹೀಗೆ ಹೇಳುತ್ತಾರೆ:  
  
 "ಸಾಂಪ್ರದಾಯಿಕ ಹಿಂದುಗಳು ಮಾಡಿದ ಕಿರುಕುಳದ ಹಿಂಸೆಗಿಂತಲೂ ಮುಸಲ್ಮಾನ್ ದಾಳಿ ಕೊರರು ಅನೇಕ ಸ್ಥಳಗಳಲ್ಲಿ ನಡೆಸಿದ ಭೀಕರ ಅತ್ಯಾಕಾಂಡಗಳು ಹೆಚ್ಚು ಪರಿಣಾಮಕಾರಿಯಾಗಿದ್ದವು ಮತ್ತು ಭಾರತದ ಅನೇಕ ಪ್ರಾಂತ್ಯಗಳಿಂದ ಬೌದ್ಧ ಧರ್ಮವು ಅದೃಶ್ಯವಾಗಲು ಬಹುಮಟ್ಟಿಗೆ ಕಾರಣವಾಗಿದ್ದವು."

ಈ ಸೃಷ್ಟಿಕರ್ಣದಿಂದ ಎಲ್ಲರಿಗೂ ಸಮಾಧಾನವಾಗುವುದಿಲ್ಲ. ಅದು ಅಸಮರ್ಪಕವಾಗಿರುವದು ಸ್ಪಷ್ಟವಾಗಿದೆ. ಬ್ರಾಹ್ಮಣ ಮತ್ತು ಬೌದ್ಧ - ಎರಡು ಧರ್ಮಗಳ ಮೇಲೆ ಇಸ್ಲಾಂ ದಾಳಿ ಮಾಡಿತು. ಒಂದು ಉಳಿಯಿತು ಮತ್ತು ಇನ್ನೊಂದು ನಾಶವಾಯಿತು - ಹೀಗೇಕೆ ಎಂದು ಕೇಳಬಹುದು. ಈ ವಾದವು ಸರಿಯಾಗಿದೆಯಾದರೂ, ವಿಷಯದ ಸಮಂಜಸತೆಯನ್ನು ನಾಶಪಡಿಸಲಾರದು. ಬ್ರಾಹ್ಮಣ ಧರ್ಮ ಉಳಿತು ಎಂದು ಒಪ್ಪಿಕೊಂಡರೆ, ಬೌದ್ಧ ಧರ್ಮದ ಪತನಕ್ಕೆ ಇಸ್ಲಾಂ ಖಡ್ಗವು ಕಾರಣವಲ್ಲವೆಂದು ಅರ್ಥವಾಗುವುದಿಲ್ಲ. ಇದರ ಒಟ್ಟು ಅರ್ಥ ಇಷ್ಟು: ಆಗಿನ ಪರಿಸ್ಥಿತಿಯು ಇಸ್ಲಾಂ ದಾಳಿಯನ್ನು ಎದುರಿಸಲು ಬ್ರಾಹ್ಮಣ ಧರ್ಮಕ್ಕೆ ಅನುಕೂಲವಾಗಿತ್ತು ಮತ್ತು ಬೌದ್ಧ ಧರ್ಮಕ್ಕೆ ಅನುಕೂಲವಾಗಿರಲಿಲ್ಲ. ಬ್ರಾಹ್ಮಣ, ಧರ್ಮದ ಸುದೈವದಿಂದ ಮತ್ತು ಬೌದ್ಧ ಧರ್ಮದ ದುರ್ದೈವದಿಂದ ಎಂದು ಹೇಳಬಹುದೇನೋ ..! ಅದು ವಸ್ತುಸ್ಥಿತಿಯಾಗಿತ್ತು. 

ಮುಸ್ಲಿಂ ದಾಳಿಯ ಆಪತ್ತನ್ನು ಎದುರಿಸಲು ಬ್ರಾಹ್ಮಣ ಧರ್ಮಕ್ಕೆ ಸಾಧ್ಯವಾಗುವಂತೆ ಮಾಡಿದ ಮತ್ತು ಬೌದ್ಧ ಧರ್ಮಕ್ಕೆ ಅಸಾಧ್ಯವಾಗುವಂತೆ ಮಾಡಿದ ಮೂರು ವಿಶೇಷ ಪರಿಸ್ಥಿತಿಗಳು ಆಗ ಇದ್ದವು ಎಂದು ಈ ವಿಷಯದ ಅಧ್ಯಯನವನ್ನು ಮುಂದುವರಿಸುವವರಿಗೆ ತಿಳಿದು ಬರುತ್ತದೆ.

ಮೊದಲನೆಯದಾಗಿ, ಮುಸ್ಲಿಂ ದಾಳಿಯ ಸಮಯದಲ್ಲಿ ಬ್ರಾಹ್ಮಣ ಧರ್ಮಕ್ಕೆ ರಾಜಶ್ರಯವಿತ್ತು. ಬೌದ್ಧ ಧರ್ಮಕ್ಕೆ ಇಂತಹ ರಾಜಶ್ರಯವಿರಲಿಲ್ಲ, ಇದಕ್ಕಿಂತ ಹೆಚ್ಚು ಮಹತ್ವದ ಸಂಗತಿ ಎಂದರೆ, ಮೂರ್ತಿ ಪೂಜೆಯ ವಿರುದ್ಧವಾದ ಅದರ ಪ್ರಾರಂಭದ ರೋಷದ ಜ್ವಾಲೆಗಳು ಆರಿ, ಇಸ್ಲಾಂ ಒಂದು ಶಾಂತ ಧರ್ಮವಾಗುವವರೆಗೆ ಬ್ರಾಹ್ಮಣ ಧರ್ಮಕ್ಕೆ ಈ ರಾಜಾಶ್ರಯವಿತ್ತು. 

ಎರಡನೆಯದಾಗಿ, ಇಸ್ಲಾಂ ಖಡ್ಗದಿಂದ ಬೌದ್ಧ ಪೌರೋಹಿತ್ಯವು ನಾಶ ಹೊಂದಿತು. ಮತ್ತು ಪುನರ್ಜೀವನ ಹೊಂದಲು ಸಮರ್ಥವಾಗಲಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಬ್ರಾಹ್ಮಣ ಪೌರೋಹಿತ್ಯವನ್ನು ನಾಶಪಡಿಸಲು ಇಸ್ಲಾಮಿಗೆ ಸಾಧ್ಯವಾಗಲಿಲ್ಲ.

ಮೂರನೇಯದಾಗಿ, ಬೌದ್ಧ ಜನಸಾಮಾನ್ಯರು ಭಾರತದ ಬ್ರಾಹ್ಮಣ ಧರ್ಮಾನುಯಾಯಿ ರಾಜರಿಂದ ಕಿರುಕುಳಕ್ಕೊಳಗಾದರು ಮತ್ತು ಈ ಹಿಂಸೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಭಾರತದ ಅಧಿಕಾಂಶ ಬೌದ್ಧ ಜನತೆಯು ಇಸ್ಲಾಂ ಧರ್ಮವನ್ನು ಸ್ವೀಕರಿಸಿತು ಮತ್ತು ಬೌದ್ಧ ಧರ್ಮವನ್ನು ತ್ಯಜಿಸಿತು.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...