Sunday, 24 November 2019

ಸ್ತ್ರೀವಾದ ಚಿಂತನೆ

ಸ್ತ್ರೀವಾದಿ ಚಿಂತನೆ ಮೊದಲನೆಯದಾಗಿ ಸ್ತ್ರೀ-ಪುರುಷರ ನಡುವಿನ ಅಸಮಾನತೆಯನ್ನು ಪ್ರಕೃತಿ ಸಹಜವಲ್ಲ, ಜೈವಿಕ ವಲ್ಲ, ಅದು ಸಾಂಸ್ಕೃತಿಕ ಹಿನ್ನೆಲೆ ಯಾಗಿದ್ದು ಪರಿಸರದ ಕಾರಣದಲ್ಲಿ ಉದ್ಭವಿಸಿದ್ದು ಎಂದು ಹೇಳುತ್ತದೆ.

ಪುರುಷ ದೃಷ್ಟಿಕೋನ ಸಾರ್ವತ್ರಿಕವಲ್ಲ. ಪುರುಷಪ್ರಧಾನ ಮೌಲ್ಯಗಳು ಪ್ರಧಾನ ಸಂಸ್ಕೃತಿ ಅನುಕೂಲಕರವಾದ ಅರ್ಧಸತ್ಯವನ್ನಷ್ಟೇ ಹೇಳುತ್ತದೆ.

ಹೆಣ್ಣುತನದ ಗುಣ ಸ್ವಭಾವಗಳು  ದೈಹಿಕವಾಗಿ ಹೆಣ್ಣಾದ ಮಾತ್ರಕ್ಕೆ ಒಳಗೊಂಡಿರುತ್ತವೆ ಎಂಬ ಮೂಲ ನಂಬಿಕೆಯನ್ನೇ ಸ್ತ್ರೀವಾದ ಪ್ರಶ್ನಿಸುತ್ತದೆ.

ಹೆಣ್ಣು ಗಂಡು ಪರಸ್ಪರ ವಿರುದ್ಧ ವ್ಯಕ್ತಿತ್ವಗಳು ಎಂಬ ಕಲ್ಪನೆಯನ್ನು ಮೊದಲು ತೊಡೆದುಹಾಕಬೇಕಾದ ಅಗತ್ಯವನ್ನು ಸ್ತ್ರೀವಾದ ಗುರುತಿಸಿದೆ.

ಸ್ತ್ರೀವಾದ ದೃಷ್ಟಿಕೋನ ಮಾನವತಾವಾದಿಕ್ಕಿಂತ ಭಿನ್ನವಲ್ಲ ,ಹುಟ್ಟಿನಿಂದಲೇ ಒಂದು ಗುಂಪು ಇನ್ನೊಂದು ಗುಂಪಿನ ಶ್ರೇಷ್ಠ ಎಂಬ ಮೂಲ ಶ್ರೇಣೀಕೃತ ವ್ಯವಸ್ಥೆಯನ್ನು ಸ್ತ್ರೀವಾದ ತಿರಸ್ಕರಿಸುತ್ತದೆ.

ಇತಿಹಾಸದುದ್ದಕ್ಕೂ ಪುರುಷ ಪ್ರಪಂಚದ ಅನುಭವಗಳೇ ಸಾರ್ವತ್ರಿಕವಾಗಿ ಎಂಬಂತೆ ಅಭಿವ್ಯಕ್ತಿಗೊಂಡು, ಸ್ತ್ರೀರಿಯರ ಅನಿಸಿಕೆ ಅನುಭವ, ಸಾಧನೆ ದಾಖಲಾಗದೆ. ಏಕಮುಖ ಚರಿತ್ರೆಯಾಗಿದೆ . ಪುರಾಣ ಪುಣ್ಯಕಥೆಗಳಲ್ಲಿ ಸತಿ ಮಣಿಯರ ಪಾತಿವ್ರತ್ಯವನ್ನು ಒತ್ತಿ ಹೇಳುವಾಗ ಪ್ರತಿಭಟಿಸದೆ ಮೆದುತನವನ್ನೇ ಆದರ್ಶವಾಗಿಸುವ ನಿಂತ ನೀರಲ್ಲಿ ಪುರುಷನ ಪ್ರತಿಬಿಂಬ ಕಂಡೆ ಅಪವಿತ್ರಳಾಗುವ ರೇಣುಕೆಯ ತಲೆ ಕಡೆದಾಗ ಪ್ರಧಾನ ಸಂಸ್ಕೃತಿ ಪುರುಷ ಲಾಭಕ್ಕಾಗಿಯೇ ದುಡಿಯುತ್ತಿತ್ತು.


ಮಹಿಳೆಗೆ ಮಕ್ಕಳ ಲಾಲನೆ ಪೋಷಣೆಯನೆಲ್ಲ ಅಂಟಿಸುವಲ್ಲಿ ಅವು ಪ್ರಕೃತಿ ಸಹಜ ಎಂದು ಸಾರುವಲ್ಲಿ ಈ ಪುರುಷ ಪ್ರಧಾನ ಸಂಸ್ಕೃತಿ ತನ್ನ ತಂದೆತನದ ಜವಾಬ್ದಾರಿಯಿಂದ ಜಾರಿಕೊಂಡಿತಲ್ಲದೆ, ಮನೆಯ ಹೊರಗಿನ ಗಂಡಿನ ದಿಗ್ವಿಜಯಗಳಿಗೆ ಇದು ಅನುಕೂಲಕರವಾಯಿತು. ಪುರುಷರು ಮಹಿಳೆಗೆ ಅನಿಸ ಬೇಕಾದದ್ದನ್ನು  ಬರೆದಿಟ್ಟರು.


ಎಲ್ಲಾ ಪುರುಷಪ್ರಧಾನ ಸಂಸ್ಕೃತಿಗಳು ಸೃಷ್ಟಿಸಿದ ಹೆಣ್ಣಿನ ಪ್ರತಿಮೆ ಎರಡು ಬಗೆಯದ್ದು." ಮಾತೇ ಇಲ್ಲವೆ ಮಾಯೆ" ಮಾತೆಯಾಗಿ ಬಹು ಮಾನ್ಯಗಳು ಪೂಜ್ಯರು ಮಾಯೆಯಾಗಿ, ಮೋಹಿನಿಯಾಗಿ, ಪುರುಷನನ್ನು ಮರುಳು ಮಾಡುವವಳು, ಹಾದಿ ತಪ್ಪಿಸುವವಳು, ಜಗತ್ತಿನ ಪಾಪವನ್ನೆಲ್ಲ ಸಂಕೇತಿಸುವವಳು.

ರಾಮನ ವಚನ ಪಾಲನೆ ರಾಜ ಧರ್ಮಗಳ ಕಥೆ ಹೇಳುವ ರಾಮಾಯಣವು, ಸೀತೆಯ ತುಮುಲ ಅಪಮಾನಗಳನ್ನು ಮರೆತುಬಿಟ್ಟಿತು. ಅಣ್ಣ ತಮ್ಮಂದಿರ ಪ್ರೀತಿ ವಿಶ್ವಾಸವನ್ನು ಹಾಡಿ ಹೊಗಳುವಾಗ. ಅಣ್ಣನ ಹಿಂದೆ ಹೋದ ಲಕ್ಷ್ಮಣನ ಭ್ರಾತೃತ್ವ ಪ್ರೇಮವನ್ನು ಕೊಂಡಾಡುವಾಗ ಹದಿನಾಲ್ಕು ವರ್ಷ ಒಂಟಿಯಾಗಿ ಕಾದ ಊರ್ಮಿಳೆ ಸ್ಥಿತಿಗೆ ಮೌನ ತಾಳಿತು.

ಮಾಧವಿಯ ಹೆಣ್ಣುತನ ಹರಿದು ಹಂಚಿದ ಬಗೆಯನ್ನು ಬಣ್ಣಿಸಲೇ ಇಲ್ಲ. ರಾಜಕುಮಾರಿಯಾಗಿ ಹುಟ್ಟಿಯೂ ನಾಲ್ವರು ರಾಜರೊಡನೆ   ಒಲ್ಲದ ಮನಸ್ಸಿನಿಂದ ಕೂಡಿ, ಎದೆ ಹಾಲು ಚಿಲ್ಲೆನ್ನುವ ಹೊತ್ತಲ್ಲಿ, ಹೆತ್ತ ಕೂಸು ತೊರೆದು ನಡೆದ ಮಾಧವಿಯ ಕಥೆಯನ್ನು ಪುರಾಣಗಳು ಹೇಳಲಿಲ್ಲ.

ಬೆಂಕಿಗಟ್ಟಿದರು ,ಕಾಡಿಗಟ್ಟಿದರು, ಕರುಣಾಳು ರಾಮನಲ್ಲಿ ತಪ್ಪು ಕಾಣದ, ಬುಟ್ಟಿಯಲ್ಲಿ ಗಂಡನನ್ನು ಹೊತ್ತು ಸೂಳೆಮನೆ ತಲುಪಿಸಿದ ಮಹಿಳೆಯರ ಶೀಲ ಪಾತಿವ್ರತ್ಯ ವಿಧೇಯತೆಗಳನ್ನು ಹಾಡಿ ಕೊಂಡಾಡಿದ ಸಂಸ್ಕೃತಿಯು, ಮಹಿಳೆಯ ಗುಣ - ಸ್ವಭಾವ, ಸ್ಥಾನ-ಮಾನ, ಸದಾ ಕಾಲ ಪುರುಷ ಕೇಂದ್ರಿತ ದೃಷ್ಟಿಕೋನದಿಂದ ಅರ್ಥೈಸಲ್ಪಟ್ಟಿತು.


ಪುರುಷ ಕೇಂದ್ರಿತ ಕೃತಿಗಳಲ್ಲಿ, ಕೃತಿ ಹೇಳುವುದಷ್ಟನ್ನೇ ಪೂರ್ಣ ಸತ್ಯವೆಂದು, ಸುಮ್ಮನಾಗದೆ,ಹೇಳದ್ದನ್ನು  ಪದ-ಪದಗಳ ನಡುವಿನ ಮೌನವನ್ನು ಆಲಿಸುತ್ತದೆ.

ಸ್ತ್ರೀವಾದಿಗಳ ಹೋರಾಟವೇನಿದ್ದರೂ ಪುರುಷ ಪ್ರಧಾನ ವ್ಯವಸ್ಥೆಯ ಪುರುಷ ಕೇಂದ್ರಿತ ನಿಲುವುಗಳನ್ನು ಎತ್ತಿಹಿಡಿಯುವ ವ್ಯವಸ್ಥೆಯ ವಿರುದ್ಧವೇ ಹೊರತು ಪುರುಷನ ವಿರುದ್ಧವಲ್ಲ.

ಸ್ತ್ರೀಪರವಾದ ವಿಚಾರಗಳ ಬಗೆಗೆ ವಿಶೇಷವಾದ ಕಾಳಜಿ ಹೊಂದಿದ್ದು , ಪ್ರತಿಸ್ಪಂದಿಸುವವರನ್ನು ಸ್ತ್ರೀವಾದಿಗಳೆಂದು ಗುರುತಿಸಬಹುದು.ಹೆಣ್ಣಾದವರಿಗೆ, ಹಣ್ಣಾಗಬಲ್ಲವರಿಗೆ ತಟ್ಟಬಲ್ಲ ಮುಟ್ಟಬಲ್ಲ ಆ ಕೋನವೇ ಸ್ತ್ರೀ ದೃಷ್ಟಿಕೋನ.

ಈ ಕಾರಣಕ್ಕಾಗಿಯೇ ಮುಡಚೆಟ್ಟು, ಮೃಲಿಗೆಗಳು ಹೆಣ್ತನದೊಂದಿಗೆ ತಳುಕು ಹಾಕಿಕೊಂಡು ಯಾಜಮಾನ್ಯ ಸಂಸ್ಕೃತಿ ನಿರ್ಧರಿಸುವ ಚೌಕಟ್ಟಿನೋಳಗೆ ಪ್ರವಹಿಸುತ್ತವೆ. ಅದರಲ್ಲೂ ವೈದಿಕ ವ್ಯವಸ್ಥೆಯ ಕರ್ಮಸಿದ್ಧಾಂತವು ಹೆಣ್ಣು ಹೆರಿಗೆ, ಮುಟ್ಟು ಮುಂತಾದವುಗಳನ್ನು ತುಚ್ಚೀಕರಿಸಿದೆ. ಸೂತಕಗೋಳಿಸಿದೆ " ನೀಲಾ"


ಸ್ತ್ರೀಗೆ ಪತಿಯೇ ಪರದೈವ

ಗಂಡನ ಊಟವಾದ ನಂತರ ಹೆಂಡತಿಯಾದವಳು ಊಟ ಮಾಡಬೇಕು. ಗಂಡನು ಎಷ್ಟೇ ಉದ್ರೇಕಗೊಳಿಸುವ ಮಾತುಗಳನ್ನಾಡಿದರು ಹೆಂಡತಿ ಹಿಂತಿರುಗಿ ಮಾತನಾಡಿಸಬಾರದು. ಹಾಗಿದ್ದರೆ ಮಾತ್ರ ಅವಳು ಗಂಡಿನ ಪ್ರಶಂಸೆಗೆ ಪಾತ್ರಳಾಗತ್ತಾಳೆ.

ಧರ್ಮ ಶಾಸ್ತ್ರಗಳೂ, ಪುರಾಣಗಳು ಸ್ತ್ರೀಯು ಪಾಲಿಗೆ ಆಶಾದಾಯಕವಾಗಿರಲಿಲ್ಲವೆನ್ನಬೇಕು. ಪುರುಷನ ಬೋಗ, ಕಾಮಾಸಕ್ತಿ,ಲೋಭತೆ, ತಮಗೆ ಬೇಕಾದ ರೀತಿಯ ಧಾರ್ಮಿಕ ಸೂತ್ರಗಳನ್ನು ನಿರ್ಮಿಸಿ ಅನೇಕ ಸ್ತ್ರೀಯರನ್ನು ಹೆಂಡತಿಯರನ್ನಾಗಿ ಪಡೆದು ಭೋಗಿಸಿ ಅವರನ್ನು ಅಲ್ಲಲ್ಲಿಯೇ ಬಿಟ್ಟು ಪುಣ್ಯ ಪುರುಷರಾಗಿ ಪೂಜನೀಯರೆನಿಸಿಕೊಳ್ಳುತ್ತಿದ್ದಾರೆ. ಹೆಂಗಸರ ಶೀಲವನ್ನೇ ಶಂಕಿಸಿ ಅವರನ್ನು ಮಾನಸಿಕ, ದೈಹಿಕವಾಗಿ,ಕ್ಷೋಭೆಗೊಳಪಡಿಸಿ ತಾವು ನಲಿದು ಮಹಿಳೆಯರನ್ನು ಶಿಕ್ಷೆಗೊಳಪಡಿಸಿದ್ದೂ ಇದೆ.


ಶಕುಂತಲೆಯನ್ನು ಪ್ರೇಮಿಸಿ ಅವಳನ್ನು ಭೋಗಿಸಿ ನಂತರ ತನ್ನ ಅರಮನೆಗೆ ಸೇರಿಸಿಕೊಳ್ಳದೆ ಕಾಡಿಗೆ ಅಟ್ಟಿದ ದುಶ್ಯಂತನು ಪುರಾಣ ಕಾವ್ಯಗಳಲ್ಲಿ ವೀರನೆನಿಸಿಕೊಂಡಿದ್ದಾನೆ.

ರಾಮನು ಅಗ್ನಿ ಸಾಕ್ಷಿಯಾಗಿ ಕೈಹಿಡಿದ ಸೀತೆಯನ್ನು ಅವಳ ಶೀಲವನ್ನು ಶಂಕಿಸಿ ಕಾಡಿಗೆ ಅಟ್ಟಿದ ಉದಾಹರಣೆಗೆ ರಾಮಾಯಣ ಗ್ರಂಥ ಸಾಕ್ಷಿಯಾಗಿದೆ.

ಮಹಾಭಾರತದಲ್ಲಿ ಮತ್ಸಯಗಂದಿ ಸತ್ಯವತಿ- ಶಂತನು ವನ್ನು ಕೂಡುವ ಮೊದಲೆ ಪರಾಶರ ಮುನಿಯನ್ನು ಕೂಡಿ ವ್ಯಾಸಮುನಿಯನ್ನು ಹಡೆಯುತ್ತಾಳೆ.

ಕುಂತಿಯ ಕತೆಯೇ ವಿಚಿತ್ರ ಆಕೆ ವಿವಾಹ ಪೂರ್ವದಲ್ಲಿ ಸುರ್ಯನಿಂದ ಕರ್ಣನನ್ನು ಪಡೆಯುತ್ತಾಳೆ.
ಮಾದ್ರಿ, ಅಶ್ವಿನಿ, ದೇವತೆಗಳಿಂದ, ಸಂತಾನವನ್ನು ಪಡೆಯುತ್ತಾಳೆ. ಪಾಂಡುವಿನ ಸತ್ತಾಗ ಚಿಂತೆಯಿಲ್ಲಿ ಸಹಗಮನ ಮಾಡುತ್ತಾಳೆ. ಹೆಂಡತಿ ಸತ್ತರೆ ಕೂಡಲೇ ಗಂಡಸಿಗೆ ಮರುಮದುವೆ ಮಾಡುವ ಸಮಾಜ.

ವೇದ, ಶಾಸ್ತ್ರ, ಪುರಾಣ, ಕಾವ್ಯಗಳೆಲ್ಲ ಬರೆದವರು ಪುರುಷರು, ಅವರಿಗೆ ಸ್ತ್ರೀಯರನ್ನು ತಮ್ಮ ಸರಿಸಮನಾಗಿ ಚಿತ್ರಿಸುವುದು ಅವಮಾನಕರವೆಂಬಂತೆ ಕಂಡಿರಬೇಕು.

ಭೌತಿಕವಾದ

*ಪ್ರಾಚೀನ ಭಾರತದಲ್ಲಿ ಭೌತಿಕವಾದ* 
*ಚಾರ್ವಾಕ /ಲೋಕಯತ ದರ್ಶನ ಒಂದು ಅಧ್ಯಯನ          ----ದೇವಿಪ್ರಸಾದ್ ಚಟ್ಟೋಪಾಧ್ಯಾಯ* 

ಇಂದ್ರಿಯ ಅನುಭವಕ್ಕೆ ನಿಲುಕದ, ಪ್ರಾಯೋಗಿಕ, ವೈಜ್ಞಾನಿಕ ,ವೈಚಾರಿಕ ತಳಹದಿಯ ಮೇಲೆ ಯಾವುದನ್ನು ಪ್ರಶ್ನಿಸದೇ ಪರೀಕ್ಷಿಸದೆ ಒಪ್ಪಿಕೊಳ್ಳದೆ ಹಾಗೂ ವಾಸ್ತವ್ /ಪ್ರತ್ಯಕ್ಷ ಅನುಭವಗಳಿಂದ ಕೂಡಿದ ಲೋಕ ಸತ್ಯಗಳನ್ನು ಒಪ್ಪುವುದಾಗಿದೆ. ಸತ್ಯವಲ್ಲದ ಸತ್ಯವನ್ನು, ಅನುಮಾನವನ್ನು,ಆಧ್ಯಾತ್ಮಿಕ ,ಸ್ವರ್ಗ-ನರಕ, ಕರ್ಮಫಲ, ಆತ್ಮ, ಎಂಬ ಪರಿಕಲ್ಪನೆಗಳನ್ನೆ ಬಂಡವಾಳವಾಗಿಸಿಕೊಂಡು ಮುಕ್ತಿ, ಮೋಕ್ಷ, ಸ್ವರ್ಗ-ನರಕದ ಪ್ರಾಪ್ತಿ ,ಎಂದು ಜನರನ್ನು ಮಾನಸಿಕ ಗುಲಾಮರನ್ನಾಗಿಸುವ ಮೂಲಕ ಹತೋಟಿಗೆ ತೆಗೆದುಕೊಳ್ಳುವ ಪುರೋಹಿತಶಾಹಿ (ಅನೇಕ ತತ್ವದರ್ಶನಗಳಿಗೆ) ತತ್ವದರ್ಶನಕೆ ವಿರೋಧಾಭಾಸ ಉಂಟುಮಾಡುವ ತರ್ಕಬದ್ಧವಾದ ದರ್ಶನ/ಶಾಸ್ತ್ರವೇ--- ಈ ಚಾರ್ವಾಕ/ ಲೋಕಾಯತ/ ಭೌತಿಕವಾದ. (ನನ್ನ ಗ್ರಹಿಕೆ.)



ಪ್ರಾಚೀನ ಭಾರತದಲ್ಲಿ ಅಧ್ಯಾತ್ಮಿಕವಾದದೊಂದಿಗೆ ಸಂಧಿಗೊಪ್ಪದ್ದೆ....ಈ ಬೌತಿಕ ವಾದವಾಗಿದೆ.
ಜನರ ತತ್ವಜ್ಞಾನ , ಐಹಿಕ ತತ್ವಜ್ಞಾನ, ಭೌತಿಕವಾದಿ ತತ್ವಜ್ಞಾನ ಎಂದು ಅರ್ಥವಿದೆ -ಈ ಬಿ ಕೋವೆಲ್.


ಆದರೆ ಭಾರತೀಯ ತತ್ವಜ್ಞಾನದೊಳಗೆ ಭೌತಿಕವಾದದ ಖಂಡನೆ ಧಾರಾಳವಾಗಿದೆ...
*ಜಯ ರಾಶಿ ಭಟ್ಟ, ಶಂಕರಾಚಾರ್ಯ ,ಮಾಧವಾಚಾರ್ಯ, ಗುಣರತ್ನ...* ಮುಂತಾದವರು ಈ ವಾದವನ್ನು ತರ್ಕಬದ್ಧವಾಗಿ ಸಮರ್ಥಿಸುವದಕ್ಕಿಂತ ವ್ಯಂಗ್ಯವಾಗಿ ವಿರೋಧಿಸುವ ಕೆಲಸವನ್ನೇ ಮಾಡಿದ್ದಾರೆ.
ಅದರ ವಿರೋಧಿಗಳ ಪ್ರಕಾರ ಭೌತಿಕ ವಾದವು  ತಿನ್ನು ,ಕುಡಿ, ಕುಣಿದಾಡು, ನೀತಿ -ಅನೀತಿ ಗಳನ್ನು ಕುರಿತಾಗಲಿ, ಸ್ವರ್ಗ ನರಕಗಳನ್ನು ಕುರಿತಾಗಲಿ ಚಿಂತಿಸದಿರು. ಕೀಳು ಪ್ರವೃತ್ತಿಯವರು, ಕೀಳು ಅಭಿರುಚಿ ಉಳ್ಳವರು ಅಪಾಯಕಾರಿಗಳೆಂದು ಬಿಂಬಿಸಲಾಗಿದೆ.

ಹಾಗೆ ನೋಡಿದರೆ ಕುರುಕ್ಷೇತ್ರದಲ್ಲಿ ಅರ್ಜುನನ ಚಂಚಲತೆಯನ್ನು ನಿವಾರಣೆ ಮಾಡಲು ಕೃಷ್ಣ ವಿಶ್ವ ರೂಪತಾಳಿ.. ಈ *"ಯುದ್ಧದಲ್ಲಿ ನೀನು ಸತ್ತರೆ ನಿನಗೆ ಸ್ವರ್ಗ ಸಿಗುತ್ತದೆ; ನೀನು ಗೆದ್ದರೆ ಇಡೀ ಭೂಮಂಡಲವನ್ನೇ ನಿನ್ನ ಸುಖ ಸಂತೋಷಗಳಿಗೆ ಪ್ರಾಪ್ತವಾಗುತ್ತದೆ"*. (ಸುಖ ಭೋಗ- ಲಾಲಸೆ) ಎಂದು ಉಪದೇಶ ನೀಡುತ್ತಾನೆ.
ಹೀಗೆ ನಿಜವಾಗಿ ನೋಡಿದರೆ ಭೌತಿಕವಾದವನ್ನು ಕುರಿತು ಮಾಡಲಾಗಿರುವ ಆರೋಪ ಅಧ್ಯಾತ್ಮಿಕವಾದಕ್ಕೆ ಸಲ್ಲುತ್ತದೆ.


*ಎಂಗಲ್ಸ್* -ಬೌದ್ಧಿಕವಾದ ದೀರ್ಘಕಾಲ ಪುರೋಹಿತ ವರ್ಗದವರ ನಿರಂತರ ಅಪಪ್ರಚಾರಕ್ಕೆ ಬಲಿಯಾಗಿದ್ದರಿಂದ ಭೌತಿಕವಾದ ಎಂಬ ಪದದ ವಿರುದ್ಧ ಪರಂಗತ ವಿಚಾರವಂತರಲ್ಲಿ ತೀವ್ರ ಪೂರ್ವಗ್ರಹ ಬೆಳೆದು ಗಟ್ಟಿಯಾಗಿದೆ‌. ಬೌತಿಕವಾದವೆಂದರೆ ಹೊಟ್ಟೆಬಾಕತನ ,ಕುರುಡುತನ, ದೃಷ್ಟಿ ಕಾಮ, ಭೋಗಲಾಲಸೆ, ಅಹಂಭಾವ, ದುರ್ಮೋಹ, ಅತ್ಯಾಶೆ, ದೋಚುವಾಸೆ, ಶೇರುಮಾರುಕಟ್ಟೆಯ ವಂಚನೆ ಇತ್ಯಾದಿಗಳೆಂದು ಭಾವಿಸಲಾಗಿದೆ..
ಈ ವಿರೋಧವೂ ಬಾಲಿಶ ಹಾಗೂ ಅರ್ಥಶೂನ್ಯವಾದದ್ದು. ತಾತ್ಸಾರ ಮನೋಭಾವದಿಂದ ತಿರಸ್ಕರಿಸುವಂತದ್ದಲ್ಲದೆ ಮತ್ತೆನೂ ಅಲ್ಲಾ.

ಅಧ್ಯಾತ್ಮಿಕವಾದಿಗಳು ಸತ್ಯವಲ್ಲದ ಸತ್ಯ ತಮ್ಮ ಮೂಲಭೂತ ದೌರ್ಬಲ್ಯವನ್ನು ಮುಚ್ಚಿಡುವುದಕ್ಕೆ ಈ ಅರ್ಥವಿಲ್ಲದ ವಾಗಾಡಂಬರವನ್ನಲ್ಲದೆ ಬೇರೆ ಏನನ್ನು ಉಪಯೋಗಿಸಲಾರರು.‌.ಅಧ್ಯಾತ್ಮಿಕ ವಾದಿಗಳ ಈ ವಾದಗತಿ ಬರೇ ತಾತ್ವಿಕ ಬೂಟಾಟಿಕೆ.. ವಂಚನೆಯಾಗಿದೆ.


*ಮಹಾಭಾರತದ ಚಾರ್ವಾಕ /ದಾನವ (ಮಿತ್)*

ಕುರುಕ್ಷೇತ್ರ ಯುದ್ಧದಲ್ಲಿ ಜಯಶಾಲಿಗಳಾದ ಪಾಂಡವ ಸಹೋದರರು ಅತ್ಯಂತ ವೈಭವ ವಿಜೃಂಭಣೆಗಳೊಂದಿಗೆ ಮರಳಿ ಪ್ರವೇಶ ಮಾಡಿದಾಗ,ಯುಧಿಷ್ಠರನಿಗೆ ಆಶೀರ್ವಾದಗಳನ್ನು ನೀಡುವುದಕ್ಕಾಗಿ ಸಹಸ್ರ ಸಹಸ್ರ ಬ್ರಾಹ್ಮಣರು ಪ್ರವೇಶದ್ವಾರದಲ್ಲಿ ನೆರೆದಿದ್ದರು. ಅವರ ನಡುವೆ ಚಾರ್ವಕ ಇದ್ದ ಅವನು ಯುಧಿಪ್ಠರನನ್ನು ನೇರವಾಗಿ... ನಿನ್ನ ತಮ್ಮಂದಿರನ್ನು ಮತ್ತು ಸಹೋದರರನ್ನು ಕೊಂದು ನೀನು ಈ ರಾಜ್ಯವನ್ನು ಪಡೆದಿದ್ದೀಯ. ಅದಕ್ಕಾಗಿ ಬ್ರಾಹ್ಮಣ ಸಮುದಾಯದ ದೂಷಿಸುತ್ತದೆ .ಹೀಗೆ ನಿನ್ನ ಕುಲದ ಹಿರಿಯರನ್ನು ಕೊಂದು ನೀನು ಪಡೆದುಕೊಂಡಿದ್ದಾದರು ಏನು..? ನೀನು ಸಾಯುವುದೇ ಲೇಸು... ಎಂದು ಪ್ರಶ್ನಿಸುತ್ತಾನೆ.
ಆಗ ಅಬ್ರಾಹ್ಮಣರು ಚಾರ್ವಕನನ್ನು ಸುಟ್ಟು ಬೂದಿ ಮಾಡಿದರು *(ಅವರ ಚಿಂತನೆಗಳನ್ನು,  ತರ್ಕವನ್ನು ,ಗ್ರಂಥಗಳನ್ನು)*


*ಪ್ರತ್ಯಕ್ಷಾನುಭವದ ಪ್ರಾಧಾನ್ಯ*
----------------------------------------

ಬೌದ್ಧಿಕವಾದಿಗಳು *ದೇಹಾತ್ಮವಾದ*  ಎಂದು ಕರೆಯುತ್ತಾರೆ. ನಮ್ಮ ಭೌತಿಕ ಶರೀರವು ಆತ್ಮವು ಒಂದೇ ಎನ್ನುವ ವಾದವಾಗಿದೆ.

ಸಾಮಾನ್ಯ ಅನುಮಾನಗಳು ಪ್ರತ್ಯಕ್ಷಾನುಭವದ ಆಧಾರವನ್ನು ಹೊಂದಿದ್ದರೆ ಅಂಥವುಗಳಿಗೆ ಅವರ ಆಕ್ಷೇಪ ವಿರಲಿಲ್ಲ.
ಪ್ರಾಚೀನಕಾಲದಲ್ಲಿ ವಿಜ್ಞಾನವು ಬೆಳವಣಿಗೆ ಹೊಂದಿದ್ದಷ್ಟು ಮಟ್ಟಿಗೆ ಪ್ರತ್ಯಕ್ಷಾನುಭವವು ಪ್ರಕೃತಿ ವಿಜ್ಞಾನದ ಬುನಾದಿಯೂ ಆಗಿತ್ತು.


*"ದೇವರು ಎಂಬುದು ಇಲ್ಲ. ಇಹಲೋಕದ ಬಂಧನದಿಂದ ಮೋಕ್ಷವೆಂಬುದು ಇಲ್ಲ. ಪುಣ್ಯ ಮತ್ತು ಪಾಪಗಳು ಇಲ್ಲ; ಅವುಗಳ ಫಲಗಳು ಎಂಬುದು ಇಲ್ಲ. ನಿಜವಾಗಿ ಇರುವುದು ಪ್ರಪಂಚ ಒಂದೇ ಅದು ಪ್ರತ್ಯಕ್ಷ ಅನುಭವಕ್ಕೆ ನಿಲುಕುವಷ್ಟಕ್ಕೆ ನಿಜವಾಗಿದೆ. ಆದುದರಿಂದ ಗೆಳೆಯ ತೋಳಗಳ ಹೆಜ್ಜೆಗುರುತುಗಳನ್ನು ನೋಡು ಹಾಗೂ ಧರ್ಮಶಾಸ್ತ್ರಗಳ ಅಪಾರ ಜ್ಞಾನವಿರುವವರೆಂದು ಹೇಳಿಕೊಳ್ಳುವವರ ಮಾತುಗಳನ್ನು ಗಮನಿಸು".* ಹೀಗೆಂದು ಹೇಳುತ್ತಾರೆ ಲೋಕಾಯತರು...

ಆತ್ಮ ಸ್ವರ್ಗ-ನರಕ ಇತ್ಯಾದಿಗಳ ಅನುಮಾನವೂ ಧಾರ್ಮಿಕ ನಂಬಿಕೆಗಳ ಬಗ್ಗೆ ಒಂದು ತರಹದ ಕುರುಡು ಭಾವನೆಯನ್ನು ಹುಟ್ಟಿಸಿ ಜನರ ಶೋಷಣೆಗೆ, ದುರ್ಬಳಕೆ ಮಾಡುವಂತ ಉಪಕರಣವಾಗಿ ಬಳಕೆಯಾಗುತ್ತದೆ.


ಅನುಮಾನವನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆನ್ನುವ ಅಭಿಪ್ರಾಯ ಬೌತಿಕವಾದಿಗಳಿಗೆ ಇದ್ದಿರಲಾರದು;ಆದರೆ ಪ್ರತ್ಯಕ್ಷಾನುಭವದ ಯಾವ ಸಮರ್ಥನೆ ಕೂಡ ಇಲ್ಲದೆಯೇ ಅನುಮಾನವು ಯಾವುದನ್ನಾದರೂ ರುಜುವಾತು ಮಾಡಿಬಿಡಬಲ್ಲವೆಂಬ ಮಾತನ್ನು ಮಾತ್ರ ಭೌತಿಕವಾದಿಗಳು ತಿರಸ್ಕರಿಸುತ್ತಾರೆ..

ಪ್ರಾಚೀನ ಭಾರತದ ತತ್ವಜ್ಞಾನ ಕ್ಷೇತ್ರದೊಳಗಿನ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವ *ಕೌಟಿಲ್ಯನ ಅರ್ಥಶಾಸ್ತ್ರ* ದೊಳಗಿನ ಸಾಕ್ಷಾಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ.....

ಕೌಟಿಲ್ಯ ಅರಸನ ಜ್ಞಾನದ ನಾಲ್ಕು ಶಾಖೆಗಳಲ್ಲಿ ಪರಿಣಿತಿ ಪಡೆಯುವುದು ಅಪೇಕ್ಷಣೀಯ 
ಆನ್ವೀಕ್ಷಿಕೀ, {(ತರ್ಕ)-ಸಾಂಖ್ಯ, ನ್ಯಾಯ ವೈಶೇಷಿಕ ಮತ್ತು ಲೋಕಾಯತ}
ತ್ರಯೀ-,(ವೇದಗಳು)
ವಾರ್ತ-(ಕೃಷಿ ಪಶುಪಾಲನೆ ಮತ್ತು ವ್ಯಾಪಾರ) 
ದಂಡನೀತಿ-(ಜನರನ್ನು ಆಳುವ ತಂತ್ರ)

ಕೌಟಿಲ್ಯ--- ನಾವು ಭಾವಿಸುವಂಥ ಕಟ್ಟಾ ವಿಚಾರವಾದಿಯಾಗಿದ್ದ ಎಂದು ತಿಳಿದರೆ ತಪ್ಪಾದೀತು .ನಿಜವಾಗಿ ಹೇಳಬೇಕೆಂದರೆ 

*ಕೌಟಿಲ್ಯ ಅರಸನ ಪ್ರಭುತ್ವವನ್ನು ನಿರ್ದಾಕ್ಷಿಣ್ಯವಾಗಿ ,ಕಠೋರವಾಗಿ ಪ್ರತಿಪಾದಿಸಿದ್ದವರಲ್ಲಿ ಪ್ರಮುಖನಾಗಿದ್ದ; ರಾಜ್ಯದ ಸುಭದ್ರ ಹಾಗೂ ಸುಸೂತ್ರ ಆಡಳಿತೆಯ ಸಲುವಾಗಿ ಜನರ ಮೂಢನಂಬಿಕೆಗಳನ್ನು ಯಾವ ಅಂಜಿಕೆಯೂ ಇಲ್ಲದೆ ಬಳಕೆ ಮಾಡಬೇಕೆಂದು ಆತ ಶಿಫಾರಸು ಮಾಡಿದ್ದ--R.s.ಶರ್ಮಾ*.

*ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆ---*
"ಹೆಣಗಳನ್ನು ಕೊಯ್ದು ನೋಡುವುದು ಶರೀರ ರಚನಾ ಶಾಸ್ತ್ರದ ಅಧ್ಯಯನಕ್ಕೆ ಅಗತ್ಯವೆಂದು, ಅದಿಲ್ಲದೆ ವೈದ್ಯಕೀಯ ಜ್ಞಾನವು ಅಪೂರ್ಣವಾಗಿ ಉಳಿಯುತ್ತದೆ ಎಂದು ಹೇಳುತ್ತವೆ.

ಶರೀರದೊಳಗಿನ ವಿವಿಧ ಅಂಗಗಳನ್ನು ಪ್ರತ್ಯಕ್ಷವಾಗಿ ಕಂಡು ತಿಳಿಯುವ ಅಗತ್ಯವಿರುತ್ತದೆ. ಊಹೆ, ಅನುಮಾನಗಳಿಂದ ಸಾಧ್ಯವಾಗದು.




*ದೇಹ ಮತ್ತು ಆತ್ಮ*
----------------------------------

ಬೌದ್ಧಿಕವಾದಿಗಳು ದೇಹ ಮತ್ತು ಆತ್ಮ ಎಂಬ ಎರಡು ಬೇರೆಬೇರೆಯಾದವುಗಳಲ್ಲ "ದೇಹಾತ್ಮವಾದ" ಎಂಬ ಒಂದೇ ಅರ್ಥದಲ್ಲಿ ಪ್ರತಿಪಾದಿಸುತ್ತಾರೆ.
ಈ ದೇಹವು *ಭೂಮಿ, ನೀರು, ಬೆಂಕಿ, ಮತ್ತು ಗಾಳಿ* ಎಂಬ ಭೌತಿಕ ವಸ್ತುಗಳಿಂದಾದ್ದದು  ಈ ನಾಲ್ಕು ಮೂಲಧಾತುಗಳಿಂದಲೇ *"ಪ್ರಜ್ಞೆ"* ಹುಟ್ಟುತ್ತದೆ.

*ಮನುಷ್ಯನೆಂದರೆ ಪ್ರಜ್ಞೆಯನ್ನು ಒಳಗೊಂಡಿರುವ ದೇಹವಲ್ಲದೆ ಇನ್ನೇನು ಅಲ್ಲವೆಂದು* ಲೋಕಾಯತರ ವಾದ.

ಇವರ ವಾದಗಳನ್ನು ಖಂಡಿಸಲು ಅವರ ವಿರೋಧಿಗಳು ಮಂಡಿಸಿದ ಮುಖ್ಯವಾದಗಳು...

*ಗುಣರತ್ನ*
ಭೌತವಸ್ತು ಅದರ ನಾಲ್ಕು ಮೂಲಧಾತುಗಳ ರೂಪದಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲೂ ಅಸ್ತಿತ್ವದಲ್ಲಿರುತ್ತದೆ ಆದರೆ ಪ್ರಜ್ಞೆ ಇರುವ ದೇಹವು ಹಾಗೆ ಎಲ್ಲ ಕಡೆಗಳಲ್ಲಿ ಇರುವುದಿಲ್ಲ.??

ಚಾರ್ವಾಕರನ್ನು ಇಂಥ ಒಂದು ಇಕ್ಕಟ್ಟಿನ ಪರಿಸ್ಥಿತಿಗೆ ಗುಣರತ್ನ ಸಿಲುಕಿಸುತ್ತಾರೆ...



*ಶಂಕರಚಾರ್ಯರು*

ಈ ದೇಹವು 4 ಮೂಲ ಧಾತುಗಳಿಂದ ಆಗಿದ್ದು ನಂತರ ಪ್ರಜ್ಞೆಯನ್ನು ಪಡೆಯುತ್ತದೆ ಎಂಬ ಚಾರ್ವಾಕರ ವಾದವನ್ನು ಶಂಕರಾಚಾರ್ಯ ವಿರೋಧಿಸುತ್ತಾ ದೇಹವಿದು ಪ್ರಜ್ಞೆ ಇಲ್ಲದಿರುವುದಕ್ಕೆ "ಸತ್ತ ಶವ" ದಉದಾರಣೆ ಕೊಡುತ್ತಾನೆ.

ದೇಹದ ಇರುವಿಕೆಯೊಂದಿಗೆ ಪ್ರಜ್ಞೆಯ ಇಲ್ಲದಿರುವಿಕೆಯನ್ನು ತೋರಿಸಿದರೆ ಸಾಲದು, ಪ್ರಜ್ಞೆಯ ಇರುವಿಕೆಯನ್ನು ದೇಹದ ಇಲ್ಲದಿದ್ದಲ್ಲಿ ಸಹ ತೋರಿಸಬೇಕಾಗುತ್ತದೆ. ಇದೊಂದು ಶಂಕರನ ವಾದ ಕ್ರಮದಲ್ಲಿ ನ್ಯೂನತೆ.



ಹೀಗೆ ದೇವಿಪ್ರಸಾದ್ ಚಟ್ಟೋಪಾಧ್ಯಾಯರು ಭೌತಿಕ ವಾದದ ಕುರಿತು ಇಲ್ಲಿ ಅನೇಕ ಅಂಶಗಳನ್ನು ಸಂಶೋಧಿಸಿ ಚರ್ಚೆ ಮಾಡಿದ್ದಾರೆ.... (ಅನುವಾದ ಬಿ. ವಿ. ಕಕ್ಕಿಲ್ಲಾಯ)

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದ.

ವೈಚಾರಿಕತೆ, ವೈಜ್ಞಾನಿಕತೆ, ಮಾನವತವಾದದ ಕುರಿತು ಪ್ರಶ್ನೆ/ ಪ್ರತಿರೋಧ/ ವಾಸ್ತವಿಕ ಕಟು ಸತ್ಯ ನುಡಿದು ಧರ್ಮ-ಪ್ರಭುತ್ವ-ಸಮಾಜದಿಂದ ಶೋಷಣೆಗಳಪಟ್ಟು ಸಮಾಜದಿಂದ ಬಹಿಷ್ಕಾರಕ್...